ತೀರ್ಪು ನನ್ನ ಪರವಾಗಿಲ್ಲ, ವಿರುದ್ಧವಾಗಿಲ್ಲ, ಆದ್ರೂ ಸ್ವಾಗತಾರ್ಹ – ಮಾಜಿ ಸ್ಪೀಕರ್ ರಮೇಶ್ ಕುಮಾರ್
ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಹಳ್ಳಿಯಿಂದ ಬೆಳೆದು ಬಂದ ನನಗೂ ಸಾರ್ಥಕವಾಯಿತು. ನಾನು ಎಲ್ಲಿ ತಪ್ಪು ಮಾಡಿದ್ದೀನೋ, ನನ್ನ ಜನ ಎಲ್ಲಿ ನನ್ನ ಮೇಲೆ ಬೇರೆ ಅಭಿಪ್ರಾಯ ಪಡ್ತಾರೋ ಅಂದ್ಕೊಂಡಿದ್ದೆ. ಸುಪ್ರೀಂ ಕೋರ್ಟ್ ನ ತೀರ್ಪು ಅಧ್ಯಕ್ಷ ಪೀಠದ ಗೌರವ ಕಾಪಾಡಿದೆ. ಸಂವಿಧಾನಕ್ಕೂ ಮಾನ್ಯತೆ ಸಿಕ್ಕಿದೆ. ತೀರ್ಪಿನಿಂದ ನನಗೆ ಸಂತೋಷವಾಗಿದೆ, ನನಗೆ ದುಃಖವೂ ಆಗಿಲ್ಲ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಅಡ್ಡಗಲ್ ನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ತೀರ್ಪು ನನ್ನ ಪರವಾಗಿಯೂ ಬಂದಿಲ್ಲ, ವಿರುದ್ಧವಾಗಿಯೂ ಬಂದಿಲ್ಲ, ಆದ್ರೂ ತೀರ್ಪನ್ನು ಸ್ವಾಗತ ಮಾಡ್ತೇನೆ. ಶಾಸಕರ ಅನರ್ಹತೆ ವಿಚಾರವಾಗಿ ನಾನು 10 ನೇ ವಿದಿ ಮಾರ್ಗದಂತೆ ಅನರ್ಹತೆ ತೀರ್ಪು ನೀಡಿದ್ದೆ. ಸುಪ್ರೀಂ ಕೋರ್ಟ್ ಯಾವ ಕಾರಣ ನೋಡಿ ಅವದಿ ತೀರ್ಪು ನೀಡಿದೆಯೋ ಗೊತ್ತಿಲ್ಲ. ರಾಜೀನಾಮೆ ಕೊಟ್ಟವರು ಮತ್ತೆ ಚುನಾವಣೆಗೆ ನಿಂತ್ರೆ ಅದು ಗೌರವ ಪ್ರಕ್ರಿಯೆ ಆಗುತ್ತೆ. ಅನರ್ಹತೆ ಶಿಕ್ಷೆಗೆ ಒಳಗಾದವರು ಮತ್ತೆ ಚುನಾವಣೆಗೆ ನಿಂತ್ರೆ ಏನ್ ಅರ್ಥ. ಸುಪ್ರೀಂ ಕೋರ್ಟ್ ಅಂಗಳದಿಂದ ಚೆಂಡು ಜನತೆ ಮುಂದೆ ಹೋಗಿದೆ, ಈಗ ಜನತೆ ತೀರ್ಪು ಕೊಡ್ತಾರೆ.
ಮೇಲ್ಮನವಿ ಸಲ್ಲಿಸೋ ವಿಚಾರದಲ್ಲಿ ಕಾಂಗ್ರೆಸ್ ಗೆ ಏನೂ ಸಲಹೆ ಕೊಡಲ್ಲ. ನನ್ನ ಆತ್ಮಸಾಕ್ಷಿ ತುಂಬಾ ಗಟ್ಟಿ ಇದೆ, ನಾನು ಯಾರಿಗೂ ಮಣಿಯೊಲ್ಲ. ಸುಪ್ರೀಂ ಕೋರ್ಟ್ ಅನರ್ಹತೆ ರದ್ದು ಮಾಡಿದ್ರೂ ನಾನು ಯೋಚನೆ ಮಾಡ್ತಿರ್ಲಿಲ್ಲ. ಸ್ಪೀಕರ್ ಸ್ಥಾನದಲ್ಲಿದ್ದಾಗ ಸ್ಥಾನದ ಘನತೆ, ಗೌರವ ಕಾಪಾಡಿದ್ದೇನೆ. ಸುಪ್ರೀಂ ಕೋರ್ಟ್ ಮೂಲ ಪ್ರಧಾನ ವಿಚಾರವನ್ನು ಎತ್ತಿ ಹಿಡಿದಿದೆ.