ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು ಹುಷಾರ್…! : ಯತ್ನಾಳ್ ಎಚ್ಚರಿಕೆ
ಫೇಸಬುಕ್ ನಲ್ಲಿ ದೇಶದ್ರೋಹದ ಹೇಳಿಕೆಗಳನ್ನು ಪೋಸ್ಟ್ ಮಾಡಿದರೆ ಜೈಲಿಗೆ ಕಳುಹಿಸುವುದೆಲ್ಲ ಇಲ್ಲ. ಇನ್ನು ಮೇಲೆ ಹಾಗೆಲ್ಲ ಮಾಡಿದರೆ ಅವರಿಗೆ ಗುಂಡೇಟು ಬೀಳುತ್ತವೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ದೇಶದ್ರೋಹಿ ಘೋಷಣೆ ಹಾಗೂ ಫೇಸ್ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಡಕ್ ವಾರ್ನಿಂಗ್ ನೀಡಿದ್ದಾರೆ. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ನಿನ್ನೆ ನಡೆದ ಸಂವಿಧಾನ ಉಳಿಸಿ ಜನಾಂದೋಲನದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ರಕ್ತಪಾತ ಕುರಿತು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಸಂವಿಧಾನ ರದ್ದು ಮಾಡಿದ್ರೆ ರಕ್ತಪಾತ ಆಗುತ್ತೆ. ಅದಕ್ಕೆ ಬಿಜೆಪಿ ಅವರು ಸಂವಿಧಾನವನ್ನು ದುರ್ಬಲ ಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ರಾಮಯ್ಯ ಹೇಳಿದ್ದರು.
ಸಿದ್ರಾಮಯ್ಯ ಅವರು ಯಾಕೋ ಪೂರ್ತಿ ಹಾದಿ(ದಾರಿ) ಬಿಡುತ್ತಿದ್ದಾರೆ. ಪ್ರಧಾನಿ ಹಾಗೂ ಗೃಹಮಂತ್ರಿಗಳು ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಪಾಸಾದ ಬಿಲ್ ಅನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಅವರ ಪಕ್ಷದ ಕಪಿಲ್ ಸಿಬಲ್ ಅವರೇ ಹೇಳಿದ್ದಾರೆ. ಸಿದ್ರಾಮಯ್ಯ ಅವರು ರಕ್ತಪಾತ ಏಕೆ ಮಾಡ್ತಾರೋ ಗೊತ್ತಿಲ್ಲ. ಅವರ ಉದ್ದೇಶ ದೇಶದಲ್ಲಿ ದಂಗೆ ಏಳಿಸುವುದು, ಅಶಾಂತಿ ಮೂಡಿಸುವುದಾಗಿದೆ. ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾರಿಗೂ ತೊಂದರೆ ಇಲ್ಲ, ದೇಶದಲ್ಲಿರುವ ಯಾವುದೇ ಜಾತಿಯವರಿಗೂ ತೊಂದರೆ ಇಲ್ಲ. ನಿನ್ನೆ ಅಮೇರಿಕ ಅಧ್ಯಕ್ಷರು ಬಂದ ವೇಳೆ ದಿಲ್ಲಿಯಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಏಳಿಸುವುದು, ಭಾರತದ ಹೆಸರು ಕೆಡಿಸುವುದು ವಿರೋಧ ಪಕ್ಷಗಳು ಮಾಡುತ್ತಿವೆ.
ವಿರೋಧ ಪಕ್ಷಗಳು ಹತಾಶರಾಗಿದ್ದು, ಇನ್ನೆಂದು ಅಧಿಕಾರಕ್ಕೆ ಬರೋದಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ನಿನ್ನೆ ನಡೆಸಿದ ಈ ಕಾರ್ಯಕ್ರಮ ದೇಶವಿರೋಧಿ ಕಾರ್ಯಕ್ರಮ ಆಗಿದೆ, ದೇಶಕ್ಕೆ ಒಳ್ಳೆಯದು ಮಾಡಲು ಆಗಿಲ್ಲ ನಮ್ಮ ದೇಶದಲ್ಲಿ ಸಾಕಷ್ಟು ರಕ್ತಪಾತಗಳು ಆಗಿವೆ. ರಾಜಮಹಾರಾಜರ ಕಾಲದಿಂದಲೂ ದೇಶ ಒಡೆಯಲು ಬ್ರಿಟೀಷರು, ಮೊಘಲರು, ಫ್ರೆಂಚರು ಬಂದು ಹೋಗಿದ್ದಾರೆ.
ಭಯೋತ್ಪಾದಕರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ, ಆದ್ರೂ ನಮ್ಮ ದೇಶಕ್ಕೆ ಏನು ಆಗಿಲ್ಲ. ಇಂತಹ ನೂರು ಸಿದ್ರಾಮಯ್ಯ, ಸಾವಿರ ರಾಹುಲ್ ಗಾಂಧಿ ಬಂದುಹೋದ್ರೂ ಈ ದೇಶಕ್ಕೆ ಯಾರೂ ಏನೂ ಮಾಡಲಾಗುವುದಿಲ್ಲ. ಕಾಂಗ್ರೆಸ್ ನವರು ಹತಾಶರಾಗಿದ್ದಾರೆ, ಕಾಂಗ್ರೆಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ, ಕಾಂಗ್ರೆಸ್ ಐಸಿಯು ನಲ್ಲಿದೆ. ಅದಕ್ಕೆ ಅವರು ಏನಾದ್ರೂ ಮಾಡಬೇಕು ಎಂದು ಪ್ರಧಾನಿ ಹಾಗೂ ಬಿಜೆಪಿ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ಪಾಕಿಸ್ತಾನ ಪರವಾಗಿ ಘೋಷಣೆಗಳಾದಾಗ ಕಾಂಗ್ರೆಸ್ ಯಾಕೆ ಹೋರಾಟ ಮಾಡಲ್ಲ? ತಾಕತ್ತಿದ್ರೆ ಹೋರಾಟ ಮಾಡಿ ತೋರಿಸಲಿ. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎನ್ನುತ್ತಾರೆ, ಇವರಿಗೆ ನಾಚಿಕೆ ಆಗಲ್ವಾ?
ಯಾರೂ ಭಾರತದ ಧ್ವಜ ಹಿಡಿಯುತ್ತಿರಲಿಲ್ಲ ಅವರು ಈಗ ಹಿಡಿಯುತ್ತಿದ್ದಾರೆ. ಯಾರು ಭಾರತ ಮಾತಾಕಿ ಜೈ ಅನ್ನುತ್ತಿರಲಿಲ್ಲ ಅವರು ಈಗ ಭಾರತ ಮಾತಾಕಿ ಜೈ ಎನ್ನುತ್ತಿದ್ದಾರೆ. ಜನಗಣಮನ ಅನ್ನದವರು ಈಗ ರಾಷ್ಟ್ರಗೀತೆ ಹಾಡುತ್ತಿದ್ದಾರೆ, ರಾಷ್ಟ್ರಧ್ವಜಕ್ಕೆ ಚುಮ್ಮಾ(ಕಿಸ್) ಕೊಡುತ್ತಿದ್ದಾರೆ. ಹಮ್ ಚುಮ್ಮೆಂಗೆ, ಹಮ್ ಕಿಸ್ ಕರೇಂಗೆ ಎನ್ನುತ್ತಿದ್ದಾರೆ, ಇಷ್ಟುದಿನ ತುಕಡೆ ತುಕಡೆ ಅಂತಿದ್ರು. ಈಗ ನಾವು ದೇಶ ಬಿಡೋದಿಲ್ಲ ಅಂತಿದ್ದಾರೆ, ಹೀಗೆ ಭಾರತ ಪರಿವರ್ತನೆ ಆಗುತ್ತಿದೆ. ಈ ರೀತಿ ದೇಶ ಬದಲಿಸಿದ ಮೋದಿಗೆ ಹಾಗೂ ಅಮೀತ್ ಶಾ ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಿದ್ದಾನೆ ಅಮೀರಖಾನ್? ಭಾರತದಲ್ಲಿ ಪರಿಸ್ಥಿತಿ ಕೆಟ್ಟಿದೆ ನಾವು ಹೋಗಬೇಕು ಅಂತಿದ್ದ, ಅಮೀರ್ ಖಾನ ಈಗ ಹೋಗಲಿ. ಇಮ್ರಾನ್ ಖಾನ ಸ್ವಾಗತ ಮಾಡಿದ್ದಾನೆ, ದೇಶವಿರೋಧಿಗಳೆಲ್ಲ ಹೋಗಲಿ, ಅವನಿಗೆ ತಿನ್ನಲು ಕೂಳಿಲ್ಲ(ಅನ್ನವಿಲ್ಲ) ಇನ್ನು ಇವರಿಗೇನು ಕೊಡ್ತಾನೆ? ಎಂದು ಕಿಡಿಕಾರಿದ್ದಾರೆ.