‘ನನಗೆ ಕ್ಯಾನ್ಸರ್ ಇರುವುದು ನಿಜ’ – ಮುತ್ತಪ್ಪ ರೈ ನೋವಿನ ಮಾತು
ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಆಗಿದ್ದ ಮುತ್ತಪ್ಪ ರೈ ತಮಗೆ ಕ್ಯಾನ್ಸರ್ ಇರೋದರ ಬಗ್ಗೆ ಖಚಿತ ಪಡಿಸಿ ಕೆಲ ನೋವಿನ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಹೌದು… ರಾಮನಗರದ ಬಿಡದಿ ಮನೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುತ್ತಪ್ಪ ರೈ, ನನಗೆ ಕಳೆದ ಕೆಲ ತಿಂಗಳ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದು ಕಂಡುಬಂತು. ನಂತರ ದೆಹಲಿ, ಮದ್ರಾಸ್ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಸುಮಾರು 90% ಈಗ ನನ್ನ ಆರೋಗ್ಯ ಸರಿಯಾಗಿದೆ.
ಬ್ರೈನ್ ಗೆ ಕ್ಯಾನ್ಸರ್ ಅಟ್ಯಾಕ್ ಆಗಿತ್ತು, ವೈದ್ಯರು ಉತ್ತಮ ಚಿಕಿತ್ಸೆ ಕೊಟ್ಟಿದ್ದಾರೆ. ಕ್ರಿಕೇಟಿಗ ಯುವರಾಜ್ ಸಿಂಗ್ ಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ನನಗೆ ಚಿಕಿತ್ಸೆ ನೀಡಿದ್ದಾರೆ. ನನಗೆ ಕ್ಯಾನ್ಸರ್ ಇರುವುದು ಸತ್ಯ, ಚಿಕಿತ್ಸೆ ಪಡೆದಿರುವುದು ಸತ್ಯ. ಆದರೆ ನನ್ನ ಆತ್ಮವಿಶ್ವಾಸದಿಂದ ಬದುಕಿದ್ದೇನೆ. ಎಷ್ಟು ದಿನ ಬದುಕಿದ್ದೇನೆಂದು ಗೊತ್ತಿಲ್ಲ, ದೇವರು ಶಕ್ತಿ ಕೊಡುವವರೆಗೂ ಬದುಕುತ್ತೇನೆ.
ಆದರೆ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಬೇಕು. ಯಾರು ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನನ್ನ ಮಕ್ಕಳು ನನ್ನನ್ನ ಚೆನ್ನಾಗಿ ನೋಡಿಕೊಂಡರು. ನನ್ನ ಶತ್ರುಗೂ ಸಹ ಈ ಕಾಯಿಲೆ ಬರಬಾರದು. ಅದೇ ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಾನು 25 ರಿಂದ 30 ಕೋಟಿ ಟ್ಯಾಕ್ಸ್ ಕಟ್ಟುತ್ತೇನೆ. ನನ್ನ ಎಲ್ಲಾ ಆಸ್ತಿಯನ್ನ ಮಕ್ಕಳಿಗೆ ವಿಲ್ ಮಾಡಿದ್ದೇನೆ. ನನ್ನ ಜೊತೆಯಲ್ಲಿ ಕೆಲವರು 15 ವರ್ಷದಿಂದ ಇದ್ದಾರೆ. ಅವರಿಗೆಲ್ಲಾ ಒಂದು ಸೈಟ್ ಕೊಡಲು ನಿರ್ಧರಿಸಿದ್ದೇನೆ. ನನ್ನ ಮಕ್ಕಳಿಗೂ ಹೇಳಿದ್ದೇನೆ, ಯಾರು ನಮ್ಮನ್ನ ಪ್ರೀತಿ ಮಾಡ್ತಾರೋ ಅವರಿಗೆ ಪ್ರೀತಿ ಮಾಡಿ. ನೀವು ಹೇಗೆ ಜನರನ್ನ ನೋಡಿಕೊಳ್ತೀರೋ, ಅವರು ನಮ್ಮನ್ನ ಕಾಣ್ತಾರೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.