ಬಡ್ಡಿ ದಂಧೆ : ಗಂಡನ ಬಡ್ಡಿ ವ್ಯವಾಹರಕ್ಕೆ ಅಮಾಯಕ ತಾಯಿ ಮಗು ಬಲಿ
ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ರೂ. ಮತ್ತೊಂದೆಡೆ ಬಡವರ ಋಣ ಮುಕ್ತ ಖಾಯ್ದೆ ತಂದರೂ ರಾಜ್ಯದಲ್ಲಿ ಮಾತ್ರ ಮೀಟರ್ ಬಡ್ಡಿ ದಂಧೆ ಕಡಿಮೆಯಾಗಿಲ್ಲ… ಕಾನೂನು ಎಷ್ಟೇ ಬಿಗಿಯಾಗಿದ್ರೂ ಬಡ್ಡಿ ದಂಧೆ ಅನಾಹುತಗಳು ನಡೆಯುತ್ತಲೇ ಇವೆ.. ಹಾಸನದಲ್ಲಿಯೂ ಕೂಡ ಗಂಡನ ಬಡ್ಡಿ ವ್ಯವಾಹರಕ್ಕೆ ಅಮಾಯಕ ತಾಯಿ ಮಗು ಬಲಿಯಾಗಿದ್ದಾರೆ.
ಹೌದು… ಹೀಗೆ ಶವವಾಗಿ ಬಿದ್ದಿರುವ ಈ ತಾಯಿ ಮಗುವಿನ ಹೆಸರು ಆಶಾ(28) ಮತ್ತು ಪುತ್ರ ದೀಕ್ಷಿತ್ ಗೌಡ(7).. ಹಾಸನದ ಚನ್ನರಾಯಪಟ್ಟಣ ತಾಲೂಕಿನ ಗಾಯತ್ರಿ ಬಡಾವಣೆ ನಿವಾಸಿಗಳು. ಆಶಾ ತನ್ನ ಪತಿ ರಘು ಎಂಬುವನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು… ತುರ್ತು ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ರಘು ತನ್ನ ಸ್ವಂತ ಅಣ್ಣನ ಹೆಂಡತಿ(ಅತ್ತಿಗೆ) ರಾಧಾ ಎಂಬಾಕೆಯ ಬಳಿ ಎರಡೂವರೆ ಲಕ್ಷ ರೂ. ಸಾಲ ಪಡೆದಿದ್ದ. ಆದರೆ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಲಾಗದ ಕಾರಣ, ಒತ್ತಡ ಹೆಚ್ಚಾದಾಗ ರಘು ಕೆಲ ದಿನಗಳಿಂದ ಕಣ್ಮರೆಯಾಗಿದ್ದ…
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅನ್ನೋ ಹಾಗೆ, ಗಂಡ ರಘು ಮಾಡಿದ ಸಾಲವನ್ನು ನೀನು ಸೇರಿಸು ಎಂದು ರಾಧಾ, ಆಕೆಯ ಪತಿ ದಿನೇಶ್ ಹಾಗೂ ಸಂಬಂಧಿ ಶಿವಲಿಂಗಪ್ಪ ಮೊದಲಾದವರು ನಿತ್ಯ ಆಶಾಳಿಗೆ ಕಿರುಕುಳ ನೀಡಲು ಆರಂಭಿಸಿದರು. ಗಂಡನ ಸಾಲವನ್ನು ನೀನು ತೀರಿಸು ಎಂದು ಮನೆಗೆ ನುಗ್ಗಿ ಆಶಾ ಮೇಲೆ ಹಲ್ಲೆ ಮಾಡಿದ್ದ ರಾಧಾ, ಪಂಚಾಯ್ತಿ ಮಾಡಿಸಿದ್ದಲ್ಲದೇ, ರೌಡಿಗಳನ್ನು ಬಿಟ್ಟು ಹೆದರಿಸಿದ್ದಳು.
ಈ ಅವಮಾನದಿಂದ ಮನನೊಂದ ಆಶಾ, ಪುತ್ರ ದೀಕ್ಷಿತ್ ಗೌಡನೊಂದಿಗೆ ಶನಿವಾರ ಸಂಜೆ ನಾಲೆಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ.
ಶೇಕಡಾ 12% ರಷ್ಟು ಪ್ರತಿ ತಿಂಗಳು ಬಡ್ಡಿಯನ್ನ ಕೊಡಲಾಗುತ್ತಿದ್ದರೂ ಸುಮ್ಮನಾಗದ ರಾಧಾ, ತಕ್ಷಣ ಹಣದ ಜೊತೆಗೆ ಬಡ್ಡಿ ಕೊಡು. ಇಲ್ಲವಾದ್ರೆ ಆಸ್ತಿ ಬರೆದು ಕೊಂಡು ಎಂದೆಲ್ಲಾ ಒತ್ತಡ ಹಾಕಿದ್ದರು. ಹಣಕಾಸು ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ಹಿನ್ನೆಲೆಯಲ್ಲಿ ರಾಜಿ ಪಂಚಾಯ್ತಿ ಸಹ ನಡೆದಿತ್ತು. ಈ ವೇಳೆ ಸಾಲ ಹಣ ವಾಪಸ್ ಕೊಡುತ್ತಾರೆ, ಅಲ್ಲೀವರೆಗೂ ಅವಕಾಶ ಕೊಡಿ ಎಂದು ರಾಧಾಳಿಗೆ ಸೂಚಿಸಲಾಗಿತ್ತು.
ಆದರೂ ಸುಮ್ಮನಾಗದ ರಾಧಾ,ಶನಿವಾರ ಆಶಾಳ ಮನೆಗೆ ನುಗ್ಗಿ ಕೈ ಮಾಡಿದ್ದಾಳೆ. ಜಗಳದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ನಿನ್ನ ಗಂಡ ಕದ್ದು ಹೋಗಿದ್ದಾನೆ ಎಂದೆಲ್ಲಾ ನಿಂದಿಸಿದ್ದಳು. ಈ ಅವಮಾನದಿಂದ ಮನನೊಂದ ಆಶಾ,ತನ್ನ ಮಗನೊಂದಿಗೆ ಶನಿವಾರ ಸಂಜೆ ಹೇಮಾವತಿ ನಾಲೆಗೆ ಹಾರಿ ಜೀವಕಳೆದುಕೊಂಡಿದ್ದಾಳೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಶಾಳ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ರಾಧಾ ಪತಿ ದಿನೇಶ್ ಸೇರಿದಂತೆ ಮೂವರ ವಿರುದ್ಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆದ್ರೆ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಹಲವಾರು ಕಾನೂನು ತರುತ್ತಿದ್ದರೂ ಅಮಾಯಕ ಬಲಿದಾನ ಮುಂದುವರೆದಿರುವುದು ಮಾತ್ರ ವಿಪರ್ಯಾಸ…