ಮಗಳ ಸಾವು ಮುಚ್ಚಿಟ್ಟು ಕೆಲಸಕ್ಕೆ ಸಿಬ್ಬಂದಿಯನ್ನು ಕಳುಹಿಸಿದ ನಿಯಂತ್ರಣಾಧಿಕಾರಿ ಅಮಾನತು…
ಕೆಎಸ್ ಆರ್ ಟಿ ಸಿ ನಿರ್ವಾಹಕನ ಮಗಳು ಮೃತಪಟ್ಟಿದ್ದರೂ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ತಿಳಿಸದೆ, ಕರ್ತವ್ಯಕ್ಕೆ ನಿಯೋಜನೆ ಮಾಡಿದ ಕೊಪ್ಪಳದ ಗಂಗಾವತಿ ಸಾರಿಗೆ ಘಟಕದ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಿಯಂತ್ರಣಾಧಿಕಾರಿ ಹೇಮಾವತಿ ಎಂಬುವವರನ್ನು ಸೇವೆಯಿಂದ ಅಮಾನತು ಮಾಡಿ, ಕೊಪ್ಪಳದ ವಿಭಾಗೀಯ ನಿಯಂತ್ರಣಾಧಿಕಾರಿ ಮೊಹ್ಮದ್ ಫೈಜ್ ಆದೇಶ ಹೊರಡಿಸಿದ್ದಾರೆ.
ಗಂಗಾವತಿಯ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ, ಬಾಗಲಕೋಟೆ ಜಿಲ್ಲೆ ಮಂಜುನಾಥ ಅವರ ಪುತ್ರಿ ಹನ್ನೊಂದು ವರ್ಷದ ಕವಿತಾ ಅನಾರೋಗ್ಯದಿಂದ ಬುಧವಾರ ಸಾವನ್ನಪ್ಪಿದ್ದರು. ಆದರೆ, ಮಂಜುನಾಥ ಕರ್ತವ್ಯದ ಮೇಲೆ ಕೊಲ್ಲಾಪುರಕ್ಕೆ ತೆರಳಿದ್ದರಿಂದ ತಕ್ಷಣ ಮಾಹಿತಿ ಸಿಕ್ಕಿರಲಿಲ್ಲ.
ಕುಟುಂಬಸ್ಥರು ಮಗುವಿನ ಸಾವಿನ ಸುದ್ದಿಯನ್ನು ಅಧಿಕಾರಿಗಳಿಗೆ ಮಟ್ಟಿಸಿದ್ದರು, ಆದರೆ, ಅಧಿಕಾರಿಗಳು ವಿಷಯ ತಿಳಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪವನ್ನು ಮಂಜುನಾಥ ಮಾಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದೆಕ್ಕೆಲ್ಲ ಅಧಿಕಾರಿ ಹೇಮಾವತಿ ಮುಖ್ಯ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದ ಕೆಎಸ್ ಆರ್ ಟಿ ಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಸಾರಿಗೆ ಸಂಸ್ಥೆಯ ಜಿಲ್ಲಾ ಸಂಚಾರ ನಿಯಂತ್ರಣಾಧಿಕಾರಿಗಳಾದ ಎ.ಗೌಡಗೇರಿ ಹಾಗೂ ದೇವಾನಮದ ಬಿರಾದಾರ್ ಎಂಬುವವರು ಸ್ಥಳಕ್ಕೆ ಭೇಟಿ ನೀಡಿ ಸಲ್ಲಿಸಿದ ವರದಿ ಅನ್ವಯ ಅಧಿಕಾರಿಯನ್ನು ವಿಭಾಗೀಯ ನಿಯಂತ್ರಣ ಅಧಿಕಾರಿ ಮೊಹ್ಮದ್ ಫೈಜ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.