ಬಿರಿಯಾನಿ ತಂದ ಬಡಿದಾಟ : ಎರಡು ಗುಂಪುಗಳ ನಡುವೆ ಘರ್ಷಣೆ, ಹಲ್ಲೆ!
ಊಟದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾದ ಘಟನೆ ಹಾಸನ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ಗ್ರಾಮದಲ್ಲಿ ನಡೆದಿದೆ.
ಫಾರ್ಚುನರ್ ಕಾರಿನಲ್ಲಿ ಯುವಕರು ಬೆಂಗಳೂರಿನಿಂದ ಹಾಸನದ ಕಡೆಗೆ ಹೋಗುತ್ತಿದ್ದರು. ಯುವಕರ ತಂಡ ಊಟಕ್ಕಾಗಿ ಮಟ್ಟನವಿಲೆ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಹೋಟೆಲ್ ನಲ್ಲಿ ಬಿರಿಯಾನಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸ್ಥಳೀಯ ಯುವಕರ ಗುಂಪಿಂದ ಫಾರ್ಚುನರ್ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ಗುಂಪಿನಿಂದ ಸ್ಥಳೀಯ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಧ್ಯರಾತ್ರಿ ಕಾರು ಹೊತ್ತಿ ಉರಿದು ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸೋ ಹೊತ್ತಿಗೆ ಕಾರು ಅಗ್ನಿಗಾಹುತಿಯಾಗಿತ್ತು. ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಪ್ರಕರಣ ದಾಖಲಾಗಿದೆ.