ಬೀದರ್ ನಲ್ಲಿ ನಿಜಾಮುದ್ದೀನ್ ನಂಜು : ಒಂದೇ ದಿನಕ್ಕೆ 11 ಜನರಲ್ಲಿ ಕೊರೊನಾ ದೃಢ..!
ವಿಶ್ವವನ್ನೇ ಸ್ಮಶನ ಮೌನಕ್ಕೆ ದೂಡಿರುವ ಕೊರೊನಾ ಒಂದೇ ದಿನದಲ್ಲಿ ಬೀದರ್ ನ 11 ಜನರಿಗೆ ತಗುಲಿರುವುದು ಇಂದು ದೃಢಪಟ್ಟಿದೆ.
ಹೌದು… ಬೀದರ್ ನ 11 ಜನ ಸೋಂಕಿತರು ದೆಹಲಿಯ ಧಾರ್ಮಿಕ ಸಭೆಗೆ ಹೋಗಿದ್ದವರು ಎಂದು ಜಿಲ್ಲಾಡಳಿತ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ನೆನ್ನೆಯವರೆಗೂ 110 ಇದ್ದ ಸೋಂಕಿತರ ಸಂಖ್ಯೆ ಇಂದು ಏಕಾಏಕಿ 121ಕ್ಕೇರಿಕೆಯಾಗಿದೆ.
ಬೀದರ್ ನಿಂದ ಒಟ್ಟು 27 ಜನ ದೆಹಲಿ ಸಭೆಗೆ ಹೋಗಿದ್ದರು. ಇವರು ಮಾರ್ಚ್ 8 ರಂದು ಬೀದರ್ ನಿಂದ ಬಸ್ ನಲ್ಲಿ ಹೈದರಾಬಾದ್ ಗೆ ಹೈದರಾಬಾದ್ ನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಮಾರ್ಚ್ 19 ರಂದು ದೆಹಲಿಯಿಂದ ವಾಪಸ್ ಆಗಿದ್ದಾರೆ.ದೆಹಲಿಯಿಂದ ಹೈದರಾಬಾದ್ ಗೆ ನಾನ್ ಎಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಹೈದರಾಬಾದ್ ನಿಂದ ಬಸ್ ನಲ್ಲಿ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. 10 ದಿನಗಳ ನಂತರ ಇವರಿಗೆ ಜ್ವರ, ಕೆಮ್ಮು ಕಂಡು ಬಂದಿದೆ. ಇಂದು ಬೆಳಿಗ್ಗೆ ಬಂದ ಲ್ಯಾಬ್ ಟೆಸ್ಟ್ ಪ್ರಕಾರ 11 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರನ್ನು ಕೊರೊನಾ ವಾರ್ಡ್ ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇವರುಗಳನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವಲ್ಲಿ ಸಮಯ ವ್ಯತ್ಯಯ ಮಾಡಿತಾ ಜಿಲ್ಲಾಡಳಿತ ಅನ್ನೋ ಅನುಮಾನ ಸದ್ಯ ಶುರುವಾಗಿದೆ.
ದೆಹಲಿಯಲ್ಲಿ ನಡೆದ ಜಮಾತ್ ಸಭೆಯಲ್ಲಿ ರಾಜ್ಯದಿಂದ 1500 ಜನ ಭಾಗವಹಿಸಿದ್ದರು ಎನ್ನುವುದು ಸದ್ಯ ಸಹಜವಾಗಿಯೇ ಆತಂಕ ಸೃಷ್ಟಿ ಮಾಡಿದೆ. ಇವರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲು ಆಗಿದೆ. ಹೀಗೆ ನಿಜಾಮುದ್ದೀನ್ ನಂಜು ಅದೆಲ್ಲೆಲ್ಲಿ ಹರಡಿದೆ ಅನ್ನೋ ಆತಂಕ ಜನರಲ್ಲಿ ಶುರುವಾಗಿದೆ.
ಇನ್ನೂ ಮೈಸೂರಿನಲ್ಲಿ 19 ಜನರಿಗೆ ಸೋಂಕು ಇದೆ. ಇಲ್ಲಿಂದಲೂ ದೆಹಲಿ ಧಾರ್ಮಿಕ ಸಭೆಗೆ 75 ಜನ ಹೋಗಿದ್ದಾರೆಂದು ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. 45 ಮಂದಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಪರೀಕ್ಷೆ ಕೂಡ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ದೆಹಲಿಯ ನಿಜಾಮುದ್ದೀನ್ ನಂಜು ರಾಜ್ಯದ್ಯಾಂತ ದೊಡ್ಡ ಮಟ್ಟದ ಸವಾಲಾಗಿದ್ದು ಜನರ ನಿದ್ದೆಗೆಡಿಸಿದೆ.