ಭಾರತದಲ್ಲಿ ಕೊರೊನಾ ಅಟ್ಟಹಾಸ : ಒಂದೇ ದಿನಕ್ಕೆ 3,390 ಹೊಸ ಸೋಂಕಿತರು ಪತ್ತೆ!
ಮಾರಣಾಂತಿಕ ಕೊರೊನಾ ವೈರಸ್ ದಿನಕಳೆದಂತೆ ಕಾಡ್ಗಿಚ್ಚಿನಂತೆ ಎಲ್ಲೆಡೆ ತನ್ನ ಬಾಹುಗಳನ್ನು ಚಾಚಿಕೊಳ್ಳುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ನಿನ್ನೆ ಒಂದೇ ದಿನಕ್ಕೆ ದೇಶದಾದ್ಯಂತ 3,390 ಹೊಸ ಸೋಂಕಿತರು ದೃಢಟ್ಟಿದ್ದು, ಮತ್ತೆ 83 ಮಂದಿ ಬಲಿಯಾಗಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟು 56342 ಸೋಂಕಿತರಿರುವುದು ದಾಖಲಾಗಿದೆ.
ಹೌದು… ಮತ್ತೊಂದು ಅಘಾತಕಾರಿ ವಿಚಾರ ಅಂದ್ರೆ ನೀವು ಗಮನಿಸಿದ್ದೀರೋ ಇಲ್ವೋ ಗೊತ್ತಿಲ್ಲ. ಭಾರತದಲ್ಲಿ ಮೇ.1 ಬಳಿಕ ನಿತ್ಯ 2000ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಗುತ್ತಿರುವುದು ಆತಂಕಕ್ಕೆ ಗುರಿಯಾಗಿದೆ.
ಈವರೆಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕೂಡ 1886ಕ್ಕೆ ಏರಿಕೆಯಾಗಿದೆ. ಈ ನಡುವೆ 56342 ಮಂದಿ ಸೋಂಕಿತರ ಪೈಕಿ 16,539 ಮಂದಿ ವೈರಸ್’ನಿಂದ ಗುಣಮುಖರಾಗಿದ್ದು, ಇದರೊಂದಿಗೆ ಗುಣಮುಖರಾಗುತ್ತಿರುವ ಶೇಕಡವಾರು 28.83ರಷ್ಟಿದೆ.
ವಿಶ್ವದಾದ್ಯಂತ ಕೊರೊನಾ ಹೆಚ್ಚು ಕಾಡುತ್ತಿರುವುದು ಅಮೆರಿಕಾವನ್ನು. ಅದರಂತೆ ಭಾರತದಲ್ಲಿ ಮಹಾರಾಷ್ಟ್ವನ್ನು ಹೆಚ್ಚಾಗಿ ಕಾಡುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಗುರುವಾರ 1216 ಹೊಸ ಕೊರೋನಾ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 17,974ಕ್ಕೆ ತಲುಪಿದೆ. ಅಲ್ಲದೆ. ಧಾರಾವಿ, ಕೊಳಗೇರಿ ಪ್ರದೇಶಗಳಲ್ಲಿ ಗುರುವಾರ ಮತ್ತೆ 50 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 783ಕ್ಕೇರಿಕೆಯಾಗಿದೆ. ಜೊತೆಗೆ ತಮಿಳುನಾಡಿನಲ್ಲಿ 580, ದೆಹಲಿ 448, ಗುಜರಾತ್ ನಲ್ಲಿ 388, ಮಧ್ಯಪ್ರದೇಶದಲ್ಲಿ 114 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಮತ್ತೊಂದು ವಿಚಾರ ಅಂದ್ರೆ ಮಹಾರಾಷ್ಟದ ಜೈಲಿನಲ್ಲಿರುವ ಖೈದಿಗಳನ್ನೂ ಕೊರೊನಾ ಬಿಟ್ಟಿಲ್ಲ. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 72 ಕೈದಿಗಳು ಮತ್ತು 7 ಜೈಲಾಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೈಲಿನ ಬಾಣಸಿಗರೊಬ್ಬರಿಂದ ಇವರೆಲ್ಲರಿಗೂ ಸೋಂಕು ತಗುಲಿದ್ದು ಎನ್ನಲಾಗುತ್ತಿದೆ.
ಹೀಗಾಗಿ ದೇಶದಲ್ಲಿ ಮತ್ತೆ ಕಠಿಣ ಲಾಕ್ಡೌನ್ ಜಾರಿಯಾಗುತ್ತಾ? ಲಾಕ್ಡೌನ್ ಸಡಿಲದ ಬಳಿಕ ಕೊರೊನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಎದ್ದಿದೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಏಮ್ಸ್ ವೈದ್ಯ, ಕೊರೋನಾ ಟಾಸ್ಕ್ ಫೋರ್ಸ್ನ ಪ್ರಮುಖ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.