ಭಿನ್ನಮತ ಶಮನಕ್ಕೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಮೊರೆ?
ಒಂದು ಕಡೆ ರಾಜ್ಯಸಭಾ ಆಕಾಂಕ್ಷಿಗಳಿಗೆ ಸಿಕ್ಕದ ಸ್ಥಾನ. ಮತ್ತೊಂದು ಕಡೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಬಯಸಿರುವ ಹಲವು ಮುಖಂಡರು. ಬಿಜೆಪಿ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತ ಶಮನಕ್ಕೆ ಮುಖ್ಯಮುಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಮಾಡಿ, ಮೂವರನ್ನು ಸಚಿವ ಸ್ಥಾನದಿಂದ ಕೈಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆ ಮೂರು ಸಚಿವ ಸ್ಥಾನವನ್ನು ಅಸಮಾಧಾನಿತ ಬಿಜೆಪಿ ಪಾಳಯದ ಮುಖಂಡರಿಗೆ ಹಾಗೂ ಉಳಿದ ಭಿನ್ನಮತೀಯರಿಗೆ ನಿಗಮ-ಮಂಡಳಿ ಸ್ಥಾನ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿದ ದಿನದಿಂದ ಪಕ್ಷದಲ್ಲಿ ಭಿನ್ನಮತೀಯರ ದ್ವನಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಉಮೇಶ್ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಸೇರಿದಂತೆ ಅನೇಕ ನಾಯಕರು ತೆರೆಯ ಮರೆಯಲ್ಲೇ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಅಲ್ಲದೆ, ತಮ್ಮದೇ ಒಂದು ಗುಂಪು ಕಟ್ಟಿಕೊಂಡು ಸಿಎಂ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.
ಈ ಭಿನ್ನಮತ ಶಮನ ಮಾಡಲು ರಾಜ್ಯಸಭೆಗೆ ಮುಖ್ಯಮಂತ್ರಿ ಕಳುಹಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ ಮನ್ನಿಸಿರಲಿಲ್ಲ.
ಹೀಗಾಗಿ ಈಗ ಬಿ ಎಸ್ ವೈ ದೀರ್ಘ ಕಾಲದ ನಂತರ ಮತ್ತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಶತಾಯಗತಾಯ ಸಿಎಂ ಖುರ್ಚಿಯನ್ನು ಉಳಿಸಿಕೊಳ್ಳಲೇಬೇಕು ಎಂದು ಮಾಸ್ಟರ್ ಪ್ಯ್ಲಾನ್ ರೂಪಿಸಿರುವ ಬಿ ಎಸ್ ವೈ ಈಗಾಗಲೇ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಅನುಮತಿ ಕೇಳಿದ್ದಾರೆ. ಹೈಕಮಾಂಡ್ ಅನುಮತಿ ನೀಡುತ್ತಿದ್ದಂತೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.