ಮಳೆ ಬಂತೆಂದರೆ ಸೋರುವ ಸಾರಿಗೆ ಸಂಸ್ಥೆ ಬಸ್ : ವಿಡಿಯೋ ವೈರಲ್
ಹುಬ್ಬಳ್ಳಿಯಿಂದ ಗುಡೇನಕಟ್ಟಿಗೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ ಮಳೆ ಬಂತೆಂದರೆ ಸೋರಲು ಆರಂಭಿಸುತ್ತೆ. ಡಕೋಟ ಬಸ್ನಿಂದಾಗಿ ಗುಡೇನಕಟ್ಟಿ- ಹುಬ್ಬಳ್ಳಿ ನಡುವೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಪರದಾಡಬೇಕಾಗಿದೆ.
ಬಸ್ನ ದುಸ್ಥಿತಿ ಕುರಿತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದರೂ ಬಸ್ ಬದಲಾವಣೆ ಮಾಡಿಲ್ಲ. ಕೆಲವು ಸಂದರ್ಭದಲ್ಲಿ ಈ ಬಸ್ನ್ನು ಗ್ರಾಮಸ್ಥರೇ ತಳ್ಳಿ ಸ್ಟಾರ್ಟ್ ಮಾಡಬೇಕು. ಗುಡೇನಕಟ್ಟಿಯಲ್ಲಿ ವಸ್ತಿ ಮಾಡುವ ಈ ಬಸ್ನ ಮೇಲ್ಭಾಗ ತುಕ್ಕು ಹಿಡಿದು ಸೋರುತ್ತಿದೆ. ಬಸ್ ಚಾಲಕ ಮತ್ತು ನಿರ್ವಾಹಕ ಇಂತಹ ಬಸ್ನಲ್ಲಿಯೇ ಮಲಗಿ ಮುಂಜಾಗೆ ಡ್ಯುಟಿ ನಿರ್ವಹಿಸಬೇಕು.
ಸೋರುವ ಬಸ್ನಲ್ಲೇ ವಿದ್ಯಾರ್ಥಿಗಳು ಹುಬ್ಬಳ್ಳಿಯ ಶಾಲಾಕಾಲೇಜುಗಳಿಗೆ ಬರಬೇಕು. ಮಳೆಯಲ್ಲಿ ಸೋರುತ್ತಲೇ ಚಲಿಸುವ ಬಸ್ನ ವಿಡಿಯೋವನ್ನು ಪ್ರಯಾಣಿಕರು ಚಿತ್ರೀಕರಿಸಿದ್ದಾರೆ. ಸೋರುವ ಬಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರಿಗೆ ಇಲಾಖೆ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.