ಮೂರು ವರ್ಷಗಳಿಂದ ಯಾವೊಂದು ಅಂಚೆ ಹಂಚದ ಪೋಸ್ಟ್ ಮ್ಯಾನ್….!
ಮೂರು ವರ್ಷಗಳಿಂದ ಯಾವೊಂದು ಅಂಚೆ ಹಂಚದ ಪೋಸ್ಟ್ ಮ್ಯಾನ್ ಸಿಕ್ಕಿಬಿದ್ದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಗಾಳ ಗ್ರಾಮದಲ್ಲಿ ನಡೆದಿದೆ.
ಸುರೇಶ್ ತಳವಾರ ಮೂರು ವರ್ಷಗಳಿಂದ ಅಂಚೆ ಹಂಚದ ಪೋಸ್ಟ್ ಮನ್. ಎಷ್ಟು ಬಾರಿ ಕೇಳಿದರೂ ಪತ್ರ ಬಂದಿಲ್ಲ ಎನ್ನುತ್ತಿದ್ದ ಅಂಚೆಯಣ್ಣ ಉದ್ಯೋಗ ಪತ್ರ, ನೇಮಕ ಪತ್ರಕ್ಕಾಗಿ ಕಾಯುತ್ತಿದ್ದ ಗ್ರಾಮದ ಯುವಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಅನುಮಾನಗೊಂಡ ಯುವಕರು ಕಚೇರಿಯ ಬಾಗಿಲು ತೆರೆದು ತಡಕಾಡಿದಾಗ ಮೂರು ವರ್ಷಗಳ ಪತ್ರಗಳು ಪತ್ತೆಯಾಗಿವೆ. ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ ಸೇರಿದಂತೆ ಸರಕಾರದ ಹಲವು ಯೋಜನೆಗಳ 1000 ಕ್ಕೂ ಹೆಚ್ಚು ಪತ್ರಗಳನ್ನ ಹಂಚದೆ ಇಡಲಾಗಿದ್ದು ಬೆಳಕಿಗೆ ಬಂದಿದೆ.
ಈ ಬಗ್ಗೆ ಅಂಚೆ ಇಲಾಖೆಯ ಮೇಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದಾರೆ. ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ಅಂಚೆ ಇಲಾಖೆಯ ಅಧಿಕಾರಿಗಳು ಪೋಸ್ಟ್ ಮ್ಯಾನ್ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.