ಮೆದುಳು ನಿಷ್ಕ್ರೀಯಗೊಂಡಿದ್ದ ವ್ಯಕ್ತಿಯ ಕಿಡ್ನಿಯನ್ನು ಮತ್ತೊಬ್ಬ ರೋಗಿಗೆ ಯಶಸ್ವಿಯಾಗಿ ಅಳವಡಿಸಿದ ವೈದ್ಯರು…
ಮೆದುಳು ನಿಷ್ಕ್ರೀಯಗೊಂಡಿದ್ದ ವ್ಯಕ್ತಿಯ ಕಿಡ್ನಿಯನ್ನು ರೋಗಿಯೊಬ್ಬನಿಗೆ ಅಳವಡಿಸುವಲ್ಲಿ ಹುಬ್ಬಳ್ಳಿಯ ವೈದ್ಯರು ಯಶಸ್ವಿಯಾಗಿದ್ದಾರೆ. ತತ್ವದರ್ಶ ಆಸ್ಪತ್ರೆಯ ಡಾಕ್ಟರ್ ವೆಂಕಟೇಶ್ ಮೋಗೆರ್ ನೇತ್ರತ್ವದ ವೈದ್ಯರ ತಂಡ ಮೂತ್ರಪಿಂಡ ಕಸಿ ಮಾಡಿ ಮೈಲಿಗಲ್ಲು ಸ್ಥಾಪಿಸಿದೆ.
47 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಡಯಾಲಿಸಿಸ್ ಮೇಲೆ ಬದುಕಿದ್ದ ಅವರಿಗೆ ಕಿಡ್ನಿ ಕಸಿಯ ಅವಶ್ಯಕತೆಯಿತ್ತು. ಯೋಗೇಶ್ ಚೌಗಲಾ ಎಂಬುವವರು ರಸ್ತೆ ಅಪಘಾತದಲ್ಲಿ ಗಂಭೀರಾವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಯೋಗೇಶ್ ಚೌಗಲಾ ಅವರ ಮಿದುಳು ನಿಷ್ಕ್ರೀಯಗೊಂಡಿತ್ತು. ಹೀಗಾಗಿ ಅವರ ಕಿಡ್ನಿಯನ್ನು ತೆಗೆದು ಹುಬ್ಬಳ್ಳಿಯ ರೋಗಿಗೆ ಕಸಿ ಮಾಡುವಲ್ಲಿ ವೈದ್ಯರು ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಅಪರೂಪವಾದ ಈ ಕಿಡ್ನಿ ಕಸಿ ಚಿಕಿತ್ಸೆಯನ್ನು ಮಾಡಿರುವ ತತ್ವದರ್ಶ ಆಸ್ಪತ್ರೆಯ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ.
ಸರ್ಕಾರದಿಂದ ಡಾ. ವೆಂಕಟೇಶ್ ಮೋಗೆರ್, ಡಾ. ಮಂಜು ಪ್ರಸಾದ್, ಡಾ. ಭರತ್ ಕ್ಷತ್ರಿ, ಡಾ. ದಿಲೀಪ್ ಜವಳಿ, ಡಾ. ಶ್ರೀನಿವಾಸ್ ಹರಪನಹಳ್ಳಿಯವರ ತಂಡ ಮೂತ್ರಪಿಂಡ ಕಸಿ ಮಾಡುವ ಮೂಲಕ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಬದುಕಿಸಿದ್ದಾರೆ. ಕಿಡ್ನಿ ಕಸಿಯಾದ ವ್ಯಕ್ತಿಯೀಗ ಡಯಾಲಿಸಿಸ್ ಇಲ್ಲದೆ ಆರೋಗ್ಯವಾಗಿದ್ದಾರೆ. ಬಡ ರೋಗಿಗಳಿಗೆ ಕಿಡ್ನಿ ಕಸಿ ಮಾಡಲು ಆರ್ಥಿಕ ನೆರವು ಸಿಗುತ್ತಿದೆ. ಉತ್ತರ ಕರ್ನಾಟಕ ಭಾಗದ ಬಡರೋಗಿಗಳು ಇದರ ಲಾಭ ಪಡೆದುಕೊಳ್ಳಬಹುದು. ಯೋಗೇಶ್ ಚೌಗಲಾ ಕುಟುಂಬಸ್ಥರ ಔದಾರ್ಯತೆ ಮೆಚ್ಚುವಂತಾದ್ದು. ಜನರಲ್ಲಿ ಜಾಗೃತಿ ಮೂಡಿದ್ರೆ ಮೂತ್ರಪಿಂಡ ಸಮಸ್ಯೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅನೇಕರಿಗೆ ಜೀವದಾನ ಮಾಡಬಹುದು ಎನ್ನುತ್ತಾರೆ ಕಿಡ್ನಿ ಕಸಿ ಮಾಡಿರುವ ವೈದ್ಯರು.