ಯೋಧನ ಮೃತದೇಹ ಹಸ್ತಾಂತರಿಸಿ ತೆರಳುವಾಗ ಅಪಘಾತ; ನಾಲ್ವರು ಪೊಲೀಸರ ದುರ್ಮರಣ
ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿ ಹಿಂದಿರುಗುತ್ತಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ, ಜಿಲ್ಲೆಯ ಭೈರಿ ಸಾರಂಗಪುರಂನಲ್ಲಿರುವ ಯೋಧನ ಕುಟುಂಬಕ್ಕೆ ಯೋಧನ ಮೃತದೇಹ ಹಸ್ತಾಂತರಿಸಿದ ಬಳಿಕ ಪೊಲೀಸ್ ಸಿಬ್ಬಂದಿ ಹಿಂದಿರುಗುತ್ತಿದ್ದರು. ಈ ವೇಳೆ ಅವರ ಕಾರು ಪಲಸಾ ಬಳಿಯಿರುವ ಹೆದ್ದಾರಿ-16ರಲ್ಲಿ ಅಪಘಾತಕ್ಕೀಡಾಗಿದ್ದು, ಓರ್ವ ಸಬ್ ಇನ್ಸ್ಪೆಕ್ಟರ್ ಮತ್ತು ಮೂವರು ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಶ್ರೀಕಾಕುಳಂಗೆ ತೆರಳುತ್ತಿದ್ದ ಪೊಲೀಸ್ ಜೀಪ್ಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎಆರ್-ಎಸ್ಐ ಜೆ. ಕೃಷ್ಣುಡು, ಹೆಡ್ ಕಾನ್ಸ್ಟೇಬಲ್ಗಳಾದ ವೈ ಬಾಬು ರಾವ್, ಟಿ. ಆಂಟೋನಿ ಮತ್ತು ಚಾಲಕ ಪಿ. ಜನಾರ್ಧನ ರಾವ್ ಸಾವಪ್ಪಿದ್ದಾರೆ ಎಂದು ಗುರುತಿಸಲಾಗಿದೆ.
ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಡಿ. ಗೌತಮ್ ಸಾವಂಗ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾಲ್ವರು ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಪೊಲೀಸ್ ಇಲಾಖೆಗೆ ನಷ್ಟವಾಗಿದೆ. ಮೃತರ ಕುಟುಂಬದ ನೆರವಿಗೆ ಇಲಾಖೆ ನಿಲ್ಲಲಿದೆ ಎಂದು ಡಿಜಿಪಿ ಸಾವಂಗ್ ಹೇಳಿದ್ದಾರೆ.
Read Also: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ಹಣ ದೋಚಿ ಪರಾರಿಯಾದ ಆರೋಪಿಗಳು!