ರಾಜ್ಯದಲ್ಲಿ ಇಳಿಕೆ ಕಂಡ ಬಿಯರ್‌ ಮಾರಾಟ : ಮಾಹಿತಿಗಾಗಿ ಜಂಟಿ ಆಯುಕ್ತರಿಗೆ ನೋಟಿಸ್‌

ರಾಜ್ಯದಲ್ಲಿ ಬಿಯರ್‌ ಮಾರಾಟದಲ್ಲಿ ತೀವ್ರ ಇಳಿಕೆಯಾಗಿದ್ದು ಈ ಕುರಿತು ಕಾರಣಗಳನ್ನು ನೀಡುವಂತೆ ಅಬಕಾರಿ ಆಯುಕ್ತರು ಎಲ್ಲಾ ಜಿಲ್ಲೆಗಳ ಜಂಟಿ ಆಯುಕ್ತರಿಗೆ ನೋಟಿಸ್‌ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಬಾರ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಕರುಣಾಕರ ರೆಡ್ಡಿಯವರು ಅಬಕಾರಿ ಇಲಾಖೆಯನ್ನೇ ದೂರಿದ್ದಾರೆ. ಪ್ರತಿ ವರ್ಷ ಶೇ.6-7% ನಷ್ಟು ಬಿಯರ್‌ ಮಾರಾಟದಲ್ಲಿ ಹೆಚ್ಚಳವಾಗುತ್ತಿತ್ತು. ಆದರೆ ಆಗ ಬಾರ್‌ ಮಾಲೀಕರ ಬೇಡಿಕೆಗನುಗುಣವಾಗಿ ಅಬಕಾರಿ ಇಲಾಖೆಯು ಪೂರೈಕೆ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಅರ್ಧದಷ್ಟು ಮಾತ್ರ ಬಿಯರ್‌ ಪೂರೈಕೆ ಮಾಡುತ್ತಿದ್ದರು. ಸ್ಟಾಕ್‌ ಇದ್ದರೂ ಕೂಡ ಐಎಂಎಲ್‌ (ವೈನ್‌, ಬ್ರಾಂದಿ ಮತ್ತು ವಿಸ್ಕಿ) ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲೆಂಬ ಕಾರಣದಿಂದ ಬಿಯರ್‌ ಪೂರೈಕೆ ಮಾಡುತ್ತಿರಲಿಲ್ಲ. ಹಾಗಾಗಿ ಜನ ಬಿಯರ್‌ ಸಿಗುತ್ತಿಲ್ಲ ಎಂದು ಭಾವಿಸಿದ್ದರಿಂದ ಮಾರಾಟದಲ್ಲಿ ಇಳಿಕೆಯಾಗಿದೆ ಎಂದಿದ್ದಾರೆ.

ನಾವು ಮುಖ್ಯಮಂತ್ರಿಯಾದಿಗಾಗಿ ಎಲ್ಲಾ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿರಲಿಲ್ಲ. ಐಎಂಎಲ್‌ ಮದ್ಯದ ಹೆಚ್ಚಿನ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಭಾರೀ ಒತ್ತಡ ಇತ್ತು. ಆದರೆ ಹಲವು ಯುವಜನ ಮತ್ತು ಮಹಿಳೆಯರು ಐಎಂಎಲ್‌ ಬದಲಿಗೆ ಬಿಯರ್‌ ಅನ್ನೇ ಇಷ್ಟಪಡುತ್ತಾರೆ. ಆದರೆ ಅಬಕಾರಿ ಇಲಾಖೆಯು ಅದಕ್ಕೆ ವಿರುದ್ಧವಾಗಿ ವರ್ತಿಸಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ಕುಸಿತ ಕಾರಣವೇ?

ದೇಶಾದ್ಯಂತ ಆವರಿಸಿರುವ ಆರ್ಥಿಕ ಕುಸಿತ ಎಲ್ಲಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತಿದೆ. ಮುಖ್ಯವಾಗಿ ಆರ್ಥಿಕ ಕುಸಿತದಿಂದ ಬಹಳಷ್ಟು ಯುವಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಜನಸಾಮಾನ್ಯರು ಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಅದು ಬಿಯರ್‌ ಮಾರಾಟದ ಮೇಲೆಯೂ ಬಿದ್ದಿರಬಹುದು ಎಂಬ ಸಂಶಯ ಸಹ ಇದೆ.

ಬಿಯರ್‌ ಮತ್ತು ಐಎಂಎಲ್‌ ಮದ್ಯದ ನಡುವೆ ಏನು ವ್ಯತ್ಯಾಸ?

ಬಿಯರ್‌‌ನಲ್ಲಿ ಆಲ್ಕೋಹಾಲಿಕ್ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಶೇ.4-6% ಮಾತ್ರ ಆಲ್ಕೋ ಹಾಲಿಕ್‌ ಬಿಯರ್‌ನಲ್ಲಿದ್ದರು ವಿಸ್ಕಿಯಲ್ಲಿ ಅದರು ಶೇ.40% ರಷ್ಟಿರುತ್ತದೆ. ಬೆಲೆಯಲ್ಲಿಯೂ ಸಹ ಬಿಯರ್‌ಗಿಂತ ಉಳಿದ ಮದ್ಯದ ಬೆಲೆ ಹೆಚ್ಚಿರುತ್ತದೆ.

ರಾಜ್ಯ ಸರ್ಕಾರದಿಂದ ಟಾರ್ಗೆಟ್‌:

ಈ ವರ್ಷದ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು 2019-20ನೇ ಆರ್ಥಿಕ ವರ್ಷಕ್ಕೆ 20,950 ಕೋಟಿ ರೂ ರಾಜಸ್ವ ಸಂಗ್ರಹಣೆ ಗುರಿ ಎಂದು ಘೋಷಿಸಿದ್ದರು. ಹಾಗಾಗಿ ಅಬಕಾರಿ ಇಲಾಖೆಯು ಪ್ರತಿ ತಿಂಗಳು, ಪ್ರತಿ ವರ್ಷವೂ ಸಹ ಎಲ್ಲಾ ಮದ್ಯ ಮಾರಾಟ ಮಳಿಗೆಗಳಿಗೆ ಇಂತಿಷ್ಟು ಮದ್ಯ ಮಾರಟ ಮಾಡಲೇಬೇಕೆಂಬ ಟಾರ್ಗೆಟ್‌ ಕೊಡಲಾಗುತ್ತದೆ. ಟಾರ್ಗೆಟ್‌ ಪೂರೈಸಲು ಸತತವಾಗಿ ವಿಫಲವಾದರೆ ಆ ಬಾರ್‌ಗಳ ಲೈಸೈನ್ಸ್‌ ರದ್ದು ಮಾಡುತ್ತೇವೆ ಎಂಬ ಎಚ್ಚರಿಕೆ ಸಹ ನೀಡಲಾಗುತ್ತಿದೆ.

ಹಾಗಾಗಿ ಬಾರ್‌ನ ಮಾಲೀಕರು ಅಕ್ರಮವಾಗಿ ಲೈಸೈನ್ಸ್‌ ಇಲ್ಲದ ಪ್ರತಿ ಊರಿನ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೂ ಸರಬರಾಜು ಮಾಡುವ ಮೂಲಕ ಟಾರ್ಗೆಟ್‌ ಪೂರೈಸುತ್ತಿದ್ದಾರೆ. ಅಲ್ಲಿಗೆ ಅಕ್ರಮ ಮದ್ಯ ಮಾರಾಟಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ.

ಒಂದು ಕಡೆ ಲಕ್ಷಾಂತರ ಮಹಿಳೆಯರು ಮದ್ಯದಿಂದಾಗಿ ತಮ್ಮ ಕುಟುಂಬವೇ ಸರ್ವನಾಶವಾಗಿದೆ, ಮದ್ಯ ನಿಷೇಧಿಸಿ ಎಂದು ಸತತವಾಗಿ ಹೋರಾಡುತ್ತಿದ್ದರೆ ಸರ್ಕಾರಗಳು ಮಾತ್ರ ಮದ್ಯ ಮಾರಾಟವನ್ನು ಹೆಚ್ಚಿಸುತ್ತಲೇ ಇವೆ. ಹಾಗಾಗಿಯೇ ಬಿಯರ್‌ ಮಾರಾಟ ಇಳಿಕೆಯಾದ ತಕ್ಷಣ ಅಬಕಾರಿ ಇಲಾಖೆ ಕಾರಣ ಕೇಳಿ ನೋಟಿಸ್‌ ನೀಡಿದೆ.

ಮದ್ಯ ನಿಷೇಧ ಆಂದೋಲನದ ಹಕ್ಕೊತ್ತಾಯಗಳು

ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ ಅನುಷ್ಠಾನಗೊಳಿಸುವುದು (ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನ ಗ್ರಾಮ ಸಭೆಗೆ ನೀಡುವುದು) ಉದಾ: ಗ್ರಾಮ ಪಂಚಾಯತಿಗಳು ಗ್ರಾಮ ಸಭೆಯ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. (ಕಾನೂನು ಬಾಹಿರ, ಖಾಸಗಿ ಅಥವಾ ಸರಕಾರಿ ಮಳಿಗೆಗಳಾಗಿರಬಹುದು) ಈಗಾಗಲೇ ಗ್ರಾಮಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯತಿಗಳಲ್ಲಿ ತಕ್ಷಣ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಬೇಕು.

ರಾಜ್ಯಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತದ ಸಂವಿಧಾನದ ಅನುಚ್ಛೇದ 47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ “ಮದ್ಯ ಮುಕ್ತ ಕರ್ನಾಟಕ ನೀತಿಯತ್ತ” ಸಾಗುವ ಸಲುವಾಗಿ ಮೂರು ತಿಂಗಳೊಳಗೆ ಸಮಿತಿ ರಚಿಸಿ ಸರಕಾರದ ನೀತಿಯನ್ನು ಜಾರಿಗೊಳಿಸಬೇಕು.

ಈ ಕುರಿತು ಚರ್ಚಿಸಲು ಮಾನ್ಯ ಮುಖ್ಯಮಂತ್ರಿಗಳು ಮದ್ಯ ನಿಷೇಧ ಆಂದೋಲನದ ಸಂಘಟಕರೊಂದಿಗೆ ಕೂಡಲೇ ಸಭೆ ಕರೆಯಬೇಕು.

ಇವಿಷ್ಟು ಹಕ್ಕೊತ್ತಾಯಗಳ ಈಡೇರಿಕೆಗೆ ಹಲವು ಬಾರಿ ಪ್ರತಿಭಟನೆ ನಡೆಸಿರುವ ಮಹಿಳೆಯರು ಯಡಿಯೂರಪ್ಪನವರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ಕಾದು ಕುಳಿತರೆ ಸರ್ಕಾರ ಮದ್ಯ ಮಾರಾಟವನ್ನು ಹೆಚ್ಚಿಸಲು ಹೊರಟಿರುವುದು ದುರಂತ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights