ರಾಜ್ಯದಲ್ಲಿ ಏ.20ರಿಂದ ಬೈಕ್ ಸಂಚಾರಕ್ಕೆ ಅನುಮತಿ : ಮೇ.3ರವರೆಗೆ ಮದ್ಯಮಾರಾಟ ಬಂದ್!
ಕೊರೊನಾ ಹರಡುವ ಭೀತಿಯಲ್ಲಿ ರಾಜ್ಯದಲ್ಲಿ 2ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಏಪ್ರಿಲ್ 20 ರ ನಂತರ ಬೈಕ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಹೌದು… ಕೋವಿಡ್ 19 ನಿರ್ವಹಣೆ ಕುರಿತಂತೆ ಇಂದು ಸಿಎಂ ಬಿಎಸ್ವೈ ಅವರು ಹಿರಿಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಏಪ್ರಿಲ್ 20ರ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಲಾಕ್ ಡೌನ್ ಉಲ್ಲಂಘನೆಯ ದೂರುಗಳು ಹೆಚ್ಚುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ವೇಳೆ ಸಿಎಂ ಸೂಚನೆ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮೇ.3ರವರೆಗೆ ಮದ್ಯ ಮಾರಾಟವಿಲ್ಲ. ಆದರೆ ಏಪ್ರಿಲ್ 20ರಿಂದ ಸ್ಥಳೀಯ ಮಟ್ಟದಲ್ಲಿ ಬೈಕ್ ಸಂಚಾರಕ್ಕೆ ಅವಕಾಶವಿದೆ ಎಂದಿದ್ದಾರೆ. ಈ ಮೂಲಕ ಲಾಕ್ ಡೌನ್ ನಡುವೆಯೂ ಬೈಕ್ ಸವಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ.
ಜೊತೆಗೆ ರಾಜ್ಯದಲ್ಲಿ ಏಪ್ರಿಲ್ 20ರ ನಂತ್ರ ಕಟ್ಟಡ ಕಾಮಗಾರಿ, ಐಟಿ-ಬಿಟಿ ಉದ್ಯೋಗ ಆರಂಭಕ್ಕೆ ಅನುಮತಿಯನ್ನು ನೀಡಲಾಗಿದೆ. ಶೇ.33ರಷ್ಟು ಐಟಿ-ಬಿಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜೊತೆಗೆ ಕಟ್ಟಡ ಕಾಮಗಾರಿ ಆರಂಭಕ್ಕೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಏಪ್ರಿಲ್ 20ರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಅನುಮತಿ ಜಿಲ್ಲಾ ವ್ಯಾಪ್ತಿಗೆ ಹೊರತು ಅಂತಹ ಲಾಕ್ ಡೌನ್ ಜಿಲ್ಲೆಗಳಿಗೆ ಸಂಚರಿಸಲು ಅಲ್ಲ. ಕಂಟೈನ್ಮೆಂಟ್ ಜೋನ್ ಗಳು ಸಂಪೂರ್ಣ ಸ್ತಬ್ಧಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.
ಇನ್ನೂ ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಉಗುಳುವುದನ್ನು ನಿಷೇಧಿಸಲಾಗಿದೆ. ಮೇ 03ರ ವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರೆಸಲಾಗುವುದು ಎಂದು ಸಿಎಂ ಹೇಳಿದರು.