ರಾಜ್ಯಸಭಾ ಚುನಾವಣೆ: ದೋಸ್ತಿಯಲ್ಲಿ ಕಣಕ್ಕಿಳಿತ್ತವಾ ಕಾಂಗ್ರೆಸ್-ಜೆಡಿಎಸ್?
ಕೊರೋನಾ ವೈರಸ್ ಸಂಕಷ್ಟದ ನಡುವೆಯೂ ಚುನಾವಣಾ ರಾಜಕಾರಣ ಮತ್ತೆ ಮೇಲೇಳುತ್ತಿದೆ. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದ್ದು, ರಾಜ್ಯಸಭೆಯಲ್ಲಿ ಸ್ಥಾನ ಪಡೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮಾಡಿಕೊಳ್ಳಲು ಮತ್ತೊಮ್ಮೆ ಮುಂದಾಗಿವೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿ ಬಂದ ನಂತರದಲ್ಲಿ ಮೈತ್ರಿಯ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.
ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ದೇವೇಗೌಡರು ಕಣಕ್ಕಿಳಿಯಲು ಬಯಸಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಅವರ ವಿಡಿಯೋ ಸಂವಾದದಲ್ಲಿ ಖರ್ಗೆ ಮತ್ತು ದೇವೇಗೌಡ ಇಬ್ಬರು ಭಾಗವಹಿಸಿದ್ದರು.
ರಾಜ್ಯಸಭೆಗೆ ಆಯ್ಕೆಯಾಗಲು 45 ಸದಸ್ಯರ ಅವಶ್ಯಕತೆಯಿದೆ. ಜೆಡಿಎಸ್ ಕೇವಲ 34 ಸದಸ್ಯರನ್ನು ಹೊಂದಿದೆ, ಹೀಗಾಗಿ ಸ್ವಂತ ಶಕ್ತಿಯಿಂದ ಗೆಲ್ಲಲು ಜೆಡಿಎಸ್ ಗೆ ಸಾಧ್ಯವಿಲ್ಲ, ಉಳಿದ ಮತಗಳಿಗಾಗಿ ಕಾಂಗ್ರೆಸ್ನ ನೆರವು ಜೆಡಿಎಸ್ಗೆ ಅಗತ್ಯವಿದೆ. ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ನೆರವು ನೀಡಿದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ನೆರವಿನ ಹಸ್ತ ನೀಡಲಿದೆ ಎನ್ನಲಾಗಿದೆ.
ಕಾಂಗ್ರೆಸ್ನ ಬಿ.ಕೆ ಹರಿಪ್ರಸಾದ್ ಮತ್ತು ಪ್ರೊ. ರಾಜೀವ್ ಗೌಡ ಹಾಗೂ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರ ರಾಜ್ಯಸಭಾ ಅಧಿಕಾರವಧಿ ಪೂರ್ಣಗೊಂಡಿದೆ. ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಒಂದು ಸ್ಥಾನವನ್ನು ಪಡೆಯುವ ಸಾಧ್ಯತೆಯಿದ್ದು, ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಗಿಟ್ಟಿಸಿಕೊಳ್ಳಲು ಮುಂದಾಗಿವೆ.
ಲಾಕ್ಡೌನ್ನಿಂದಾಗಿ ಚುನಾವಣೆ ನಡೆಸಲಾಗಿಲ್ಲ. ಚುನಾವಣೆ ನಡೆಸಲು ಸಿದ್ದರಿದ್ದು, ಕೇಂದ್ರ ಚುನಾವಣಾ ಆಯೋಗದ ಅನುಮತಿಗಾಗಿ ಕಾಯುತ್ತಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಹೇಳಿದ್ದಾರೆ.