ಲಾಕ್ಡೌನ್ ಉಲ್ಲಂಘಿಸುವವರ ಕಾಲಿಗೆ ಗುಂಡಿಕ್ಕುವ ಪೊಲೀಸರಿಗೆ 5,100 ಬಹುಮಾನ ಎಂದ ಬಿಜೆಪಿ ಶಾಸಕ!
ದಿನೇ ದಿನೇ ಕೊರೊನಾ ಸೋಂಇತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ನಾನಾ ಕಠಿಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿವೆ. ಆದರೆ ಇದಕ್ಕೆ ಪುಷ್ಠಿ ನೀಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಶಿಕ್ಷೆ ನೀಡಲು ಸೂಚಿಸಿದ್ದಾರೆ.
ಹೌದು….ಕೊರೊನಾ ತಡೆಗೆ ದೇಶಾದ್ಯಾಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೂ ಜನ ಹೊರಬರುವುದನ್ನ ಬಿಟ್ಟಿಲ್ಲ. ನಿಯಮ ಉಲ್ಲಂಘಿಸುವುದನ್ನ ನಿಲ್ಲಿಸಿಲ್ಲ. ಹೀಗಾಗಿ ಲಾಕ್ಡೌನ್ ಆದೇಶ ಉಲ್ಲಂಘಿಸಿ ತಿರುಗಾಡುವವರ ಕಾಲಿಗೆ ಗುಂಡು ಹೊಡೆಯಿರಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಪೊಲೀಸರಿಗೆ ಹೇಳಿದ್ದಾರೆ. ಗುಂಡು ಹೊಡೆಯುವ ಪೊಲೀಸರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.
ಅಷ್ಟುಮಾತ್ರವಲ್ಲದೇ ಆದೇಶ ಉಲ್ಲಂಘಿಸುವವರನ್ನು ‘ದೇಶದ್ರೋಹಿಗಳು’ ಎಂದು ಕರೆದಿರುವ ಅವರು, ಅಂತಹವರ ಕಾಲಿಗೆ ಗುಂಡಿಕ್ಕುವ ಪೊಲೀಸರಿಗೆ 5,100 ಬಹುಮಾನ ನೀಡುವೆ ಎಂದು ಹೇಳಿದ್ದಾರೆ.
‘ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರುತ್ತಿರು ಬಗ್ಗೆ ತಿಳಿದುಬಂದಿದೆ. ಅಂತಹವರ ಜತೆ ಪೊಲೀಸರು ಶಿಸ್ತಿನಿಂದ ವರ್ತಿಸಬೇಕಿದೆ. ಅಗತ್ಯಬಿದ್ದಲ್ಲಿ ಕಾಲಿಗೆ ಗುಂಡಿಕ್ಕುವ ಬಗ್ಗೆಯೂ ಗಮನಿಸಬೇಕಿದೆ’ ಎಂದು ಗುರ್ಜರ್ ಹೇಳಿದ್ದಾರೆ.
ಕೊರೊನಾ ವೈರಸ್ ಗೋಶಾಲೆಗಳನ್ನು ಪ್ರವೇಶಿಸುವುದಿಲ್ಲ ಎಂದು ಗುರ್ಜರ್ ಈ ಹಿಂದೆ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಗುರಿಯಾಗಿತ್ತು.