ಸೆಪ್ಟೆಂಬರ್ನಲ್ಲಿ ಅಧಿವೇಶನ: ಸುಗ್ರೀವಾಜ್ಞೆ ಕುರಿತು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿ ಸಾಧ್ಯತೆ!
ರಾಜ್ಯ ಮುಂಗಾರು ಅಧಿವೇಶನ ಸೆಪ್ಟೆಂಬರ್ 21 ರಿಂದ 30ರ ವರೆಗೆ ನಡೆಸಲು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೊರೊನಾ ಸೋಂಕು ಕಾರಣದಿಂದಾಗಿ ಕಳೆದ ಬಾರಿ ಬೇಸಿಗೆ ಅಧಿವೇಶನವನ್ನು ಮುಂದೂಡಲಾಗಿತ್ತು. ಈ ವೇಳೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದು, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ. ಇದು ಸಾಮಾನ್ಯವಾಗಿ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ವಿರೋಧ ಪಕ್ಷಗಳ ಅಭಿಪ್ರಾಯ ಕೇಳದೆ ಚರ್ಚೆಯಾಗದೆ ಈ ಎರಡೂ ಕಾಯ್ದೆಯನ್ನು ಕೊರೊನಾ ಸಂಕಷ್ಟದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಅಂಗೀಕಾರ ಮಾಡುವ ಅಗತ್ಯವೇನಿತ್ತು ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು ಶೀಘ್ರದಲ್ಲೇ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದರು.
ಹೀಗಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಕುರಿತು ಚರ್ಚೆ ನಡೆಸಿದ್ದು, ಸೆಪ್ಟೆಂಬರ್ 21 ರಿಂದ 30ರ ವರೆಗೆ ಮುಂಗಾರು ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಕೊರೊನಾ ನಡುವೆಯೂ ಸುಗ್ರೀವಾಜ್ಞೆಯನ್ನು ಸರ್ಕಾರ ಜಾರಿಗೊಳಿಸಿರುವುದರಿಂದಾಗಿ ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ವಿಭಜನೆಯಿಂದ ಸಿದ್ದರಾಮಯ್ಯ ಸಿಎಂ ಆಗಿದ್ದು, ಇಲ್ಲದಿದ್ದರೆ ಸಿಎಂ ಪಟ್ಟ ಕನಸಾಗಿರುತ್ತಿತ್ತು: ಈಶ್ವರಪ್ಪ