ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಲು ಆಸ್ಪತ್ರೆಗಳಿಗೆ ಸಾಧ್ಯವಿಲ್ಲ, ಅಂತಹ ಆಸ್ಪತ್ರೆಗಳಿಗೆ ಉಳಿವಿಲ್ಲ: ಕೇಜ್ರಿವಾಲ್
ದೆಹಲಿಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಬೆಡ್ಗಳ ಕೊರತೆಯಿಲ್ಲ. ರೋಗ ಲಕ್ಷಣಗಳಿರುವ ಯಾರನ್ನೂ ಅಲೆದಾಡಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಗಳ ಬಗೆಗೆ ಬಂದ ಟೀಕೆ ಹಾಗೂ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವು ಆಸ್ಪತ್ರೆಗಳು ಕಿಡಿಗೇಡಿತನ ಪ್ರದರ್ಶಿಸುತ್ತಿವೆ. ಅಂತಹ ಆಸ್ಪತ್ರೆಗಳಿಗೆ ಸ್ಥಾನವಿಲ್ಲ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಕೆಲವು ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಇತರ ಪಕ್ಷಗಳ ನಾಯಕ ಪ್ರಭಾವ ಬಳಸಿ ಬೆಡ್ಗಳನ್ನು ಕಳ್ಳದಾರಿಯಲ್ಲಿ ವ್ಯಾಪಾರ ಮಾಡುಲು ಮುಂದಾಗಿರುವ ಆಸ್ಪತ್ರೆಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಸೋಂಕಿನ ಲಕ್ಷಣಗಳಿದ್ದರೂ ಸಹ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಓಡಿಸಲು ಮತ್ತು ಪರೀಕ್ಷೆಯನ್ನು ನಿರಾಕರಿಸಲಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
“ಈ ರೀತಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ ಆಸ್ಪತ್ರೆಗಳನ್ನು ಗುರುತಿಸಿ ಪಟ್ಟಿ ಮಾಡಲು ನಮಗೆ ಕೆಲವು ದಿನಗಳ ಕಾಲಾವಕಾಶ ನೀಡಿ. ಹಾಸಿಗೆಗಳು ಲಭ್ಯವಿದ್ದಾಗಲೂ ರೋಗಿಗಳನ್ನು ನಿರಾಕರಿಸುತ್ತಿರುವವರ ವಿರುದ್ಧ ನಾವು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಕೆಲವರು ಹಾಸಿಗೆಗಳ ಕಪ್ಪು-ಮಾರಾಟ (ಬ್ಲಾಕ್ ಮಾರ್ಕೆಟಿಂಗ್) ದಲ್ಲಿ ತೊಡಗಿದ್ದಾರೆ” ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.
“ಹಾಸಿಗೆಗಳ ಕಪ್ಪು ಮಾರಾಟವನ್ನು ತಡೆಯಲು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿದ್ದೇವೆ. ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಮತ್ತು ವೆಂಟಿಲೇಟರ್ಗಳ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಪಾರದರ್ಶಕವಾಗಿಡಲು ಯೋಚಿಸಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದರು.
ಸಾವಿರಾರು ರೋಗಲಕ್ಷಣವಿಲ್ಲದ ಜನರು ಪರೀಕ್ಷೆಗೆ ಸರದಿಯಲ್ಲಿ ನಿಂತರೆ ಆರೋಗ್ಯ ವ್ಯವಸ್ಥೆಯು ಕುಸಿಯುತ್ತದೆ. ಜನರಿಗೆ ಚಿಕಿತ್ಸೆ ನೀಡುವ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ವ್ಯವಸ್ಥಿತವಾಗಿರಿಸಲು ರೋಗಲಕ್ಷಣಗಳು ಇರುವವರಿಗೆ ಮಾತ್ರ ಪರೀಕ್ಷೆ ನಡೆಸಬೆಕು ಎಂದು ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಚಿಕಿತ್ಸೆ ಪಡೆಯಲು ಆಸ್ಪತ್ರೆ ಸಿಗದೆ ಸಾವನ್ನಪ್ಪಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ 1,330 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಈವರೆಗೆ ಒಟ್ಟು 26,000 ಸೋಂಕಿತರಿದ್ದಾರೆ. 708 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.