ಹುಟ್ಟುಹಬ್ಬದ ದಿನವೇ‌ ಬಿಜೆಪಿ ಮುಖಂಡನ ಕೊಲೆ : ಬಾಟಲ್‌ಗಳಿಂದ ಚುಚ್ಚಿದ ದುಷ್ಕರ್ಮಿಗಳು!

ಹುಟ್ಟುಹಬ್ಬದ ದಿನವೇ‌ ಬಿಜೆಪಿ ಮುಖಂಡನ ಭೀಕರ ಕಗ್ಗೊಲೆ ಮೈಸೂರಿನಲ್ಲಿ ನಡೆದಿದೆ.

ಆನಂದ್ ಅಲಿಯಾಸ್ ವಡ್ಡ ಆನಂದ್ ಮೃತ ಬಿಜೆಪಿ ಮುಖಂಡ. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದನು. ಮೈಸೂರಿನ ಕುವೆಂಪುನಗರದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಬಿಜೆಪಿ ಮುಖಂಡ ಎಸ್ ಆನಂದ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಬಾಟಲ್‌ಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಕೊಲೆಯಾದ ಎಸ್.ಆನಂದ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದನು.ಹಳೇ ವೈಷಮ್ಯದ ಮೇಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ 13 ವರ್ಷಗಳ ಹಿಂದೆ ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನ ಮರ್ಡರ್ ಮಾಡಿದ್ದ ಆನಂದ್ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದನು.

ನಿನ್ನೆ ಆನಂದ್ ನ ಹುಟ್ಟುಹಬ್ಬವಿತ್ತು. ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದಿನವೇ‌ ಆನಂದ್ ಹತನಾಗಿದ್ದಾನೆ. ಹುಟ್ಟುಹಬ್ಬದ ದಿನವೇ ಕೊಚ್ಚಿ ಕೊಂದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ , ಡಿಸಿಪಿ ಪ್ರಕಾಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ಆನಂದ್ ಬರ್ತ್‌ಡೇ ಇತ್ತು. ಅದಕ್ಕಾಗಿ ಆನಂದ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದರು. ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್ಮೆಂಟ್‌ಗೆ ಬಂದಿದ್ದಾರೆ. ಇಲ್ಲಿ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದಾರೆ. ಈ ವೇಳೆ ಅಲ್ಲಿದ್ದವರಲ್ಲೆ ಗಲಾಟೆ ಆರಂಭವಾಗಿದೆ. ಆಗ ಬಾಟಲ್‌ನಲ್ಲಿ ಚುಚ್ಚಿ ಕೊಲೆ ಮಾಡಿದ್ದಾರೆ. ಯಾರ್ಯಾರು ಇದ್ದರು ಅಂತ ಮಾಹಿತಿ ಗೊತ್ತಾಗಿದೆ. ಅವರೇಲ್ಲರನ್ನ ಹಿಡಿದು ವಿಚಾರಣೆ ಮಾಡ್ತಿವಿ. ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಯಾರು ಮಾಡಿದ್ದಾರೆ ಅನ್ನೋದನ್ನ ಈಗಲೇ ಹೇಳೋಕಾಗೋಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights