ಹುಲಿ ಇದೆ ಎಚ್ಚರ..! : ಮಂಗಗಳ ಕಾಟ ತಡೆಯಲು ಕಾಫಿ ಬೆಳೆಗಾರರ ಹೊಸ ಪ್ಲಾನ್
ಮಲೆನಾಡಿಗೂ ಮಂಗಗಳಿಗೂ ಎಲ್ಲಿಲ್ಲದ ನಂಟು. ಅದು ಕೂಡ ಮಳೆಗಾಲ ಕಳೀತೆಂದ್ರೆ ಕಾಡಿನಲ್ಲಿರೋ ವಾನರಗಳೆಲ್ಲ ನಾಡಿನ ಕಡೆಗೆ ಮುಖ ಮಾಡಿ ಬಿಡುತ್ತದೆ. ಆಹಾರ, ನೀರು ಅರಸಿ ಹಿಂಡು ಹಿಂಡಾಗಿ ನಾಡ ಸಂಚಾರ ಆರಂಭಿಸಿ ಬಿಡುತ್ತವೆ. ಹೀಗಾಗಿ ಕಾಫಿ ಬೆಳೆ ಸೇರಿದಂತೆ ನಾನಾ ಬೆಳೆಗಳು ವಾನರಪಡೆಯ ಅಟ್ಟಹಾಸಕ್ಕೆ ನಲುಗಿ ಹೋಗಿಬಿಡುತ್ವೆ. ಸದ್ಯ ಈ ಎಲ್ಲಾ ಬೆಳವಣಿಗೆಗಳಿಂದ ರೋಸಿ ಹೋಗಿರೋ ರೈತರು, ಕಾಫಿ ಬೆಳೆಗಾರರು ಮಂಗಗಳ ಕಾಟವನ್ನ ತಡೆಯಲು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಲ್ಲದೇ ಅದರಲ್ಲಿ ಯಶಸ್ಸು ಕೂಡ ಕಾಣುತ್ತಿದ್ದಾರೆ.. ಅಷ್ಟಕ್ಕೂ ಅದೇನ್ ಆ ಪ್ಲಾನ್ ಅಂತೀರಾ.? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್..
ಒಂದೆಡೆ ಕಾಫಿ ತೋಟದಲ್ಲಿ ಸ್ವಾಗತ ಕೋರಲು ನಿಂತಿರೋ ವ್ಯಾಘ್ರ.. ಹುಲಿಯ ವಕ್ರ ನೋಟಕ್ಕೆ ಬೆಕ್ಕಸ ಬೆರಗಾಗಿರೋ ಜನ್ರು.. ಇನ್ನೊಂದೆಡೆ ಕಾಫಿ ತೋಟಕ್ಕೆ ಎಂಟ್ರಿ ಕೊಟ್ರೆ ತಿಂದ್ ಹಾಕಿಬಿಡ್ತೀನಿ ಅನ್ನೋ ರೆಂಜ್ನಲ್ಲಿ ದಿಟ್ಟಿಸಿ ನೋಡ್ತಿರೋ ಹುಲಿ. ಇದು ನಿಜಕ್ಕೂ ಟೈಗರಾ..? ಯಪ್ಪೋ.. ವ್ಯಾಘ್ರನ ನೋಟವನ್ನ ನೋಡಿದ್ರೆ ಭಯವಾಗುತ್ತಲ್ವಾ ಅಂತಾ ಮಾತನಾಡಿಕೊಳ್ತಿರೋ ಕಾಫಿ ತೋಟದ ಮಾಲೀಕರು. ಅಂದಾಗೆ ಇಂತಹ ದೃಶ್ಯಗಳು ಮಲೆನಾಡಿನ ಕಾಫಿ ತೋಟಗಳಲ್ಲಿ ಇದೀಗ ಕಾಮನ್ ಅನ್ನುವಷ್ಟರಲ್ಲಿ ಮಟ್ಟಿಗೆ ಆಗಿಬಿಟ್ಟಿದೆ.
ಹೌದು, ಬಿಸಿಲು ಬೇಗೆಯನ್ನ ತಡೆಯಲಾರದೇ ಇತ್ತೀಚಿಗೆ ಆಹಾರ, ನೀರನ್ನ ಅರಸಿ ಮಂಗಗಳು ನಾಡಿನ ಕಡೆ ಮುಖ ಮಾಡ್ತಿವೆ. ಹೀಗೆ ಹಿಂಡು ಹಿಂಡಾಗಿ ಬರೋ ವಾನರಪಡೆ, ಅಪಾರ ಪ್ರಮಾಣದ ಕಾಫಿ ಬೆಳೆ, ಮೆಣಸಿನ ಬಳ್ಳಿ, ಭತ್ತ ಸೇರಿದಂತೆ ಅನೇಕ ಬೆಳೆಗಳನ್ನ ನಾಶ ಮಾಡುತ್ತಿದೆ. ಹೀಗಾಗಿ ಮಂಗಗಳನ್ನ ನಿಯಂತ್ರಿಸಲು ಏನೇನೋ ಹರಸಾಹಸ ಪಟ್ಟ ರೈತರು ಇದೀಗ ಇವುಗಳನ್ನ ಓಡಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮತ್ತಿಗಟ್ಟೆ ಸಮೀಪದ ಕಾಫಿ ಎಸ್ಟೇಟ್ಗಳಲ್ಲಿ ಇಂಥದೊಂದು ಪ್ರಯೋಗ ಮಾಡಲಾಗುತ್ತಿದ್ದು ಕಾಡಾನೆಗಳ ಕಾಟ ತಪ್ಪಿದೆ ಅಂತಾ ರೈತರು ಸಂತಸ ಪಡುತ್ತಿದ್ದಾರೆ.
ಮತ್ತಿಗಟ್ಟೆಯ ಮಹೇಶ್ ಎಂಬುವರ ಕಾಫಿ ತೋಟ, ಅರಣ್ಯದ ಪಕ್ಕದಲ್ಲಿದ್ದು, ಒಂದು ರೀತಿ ಮಂಗಗಳ ತವರು ಮನೆಯಾಗಿಯೇ ರೂಪುಗೊಂಡಿತ್ತು. ಪ್ರತಿವರ್ಷ ಲಕ್ಷಗಟ್ಟಲೇ ರೂಪಾಯಿ ಹಣವನ್ನ ನಷ್ಟಮಾಡಿಕೊಳ್ಳುತ್ತಿದ್ದ ಇವರು ಕೊನೆಗೆ ಡುಪ್ಲಿಕೆಟ್ ಟೈಗರ್ನ ಮೊರೆ ಹೋದ್ರು. ಕಾಫಿ ಬೆಳೆ, ಮೆಣಸು ಬೆಳೆಯ ನಷ್ಟದಿಂದ ರೋಸಿ ಹೋಗಿದ್ದ ಮಹೇಶ್ ಸದ್ಯ ಹುಲಿ ಮಂಗಗಳ ಮೇಲೆ ಅಟ್ಯಾಕ್ ಮಾಡ್ತಿರೋ ಫ್ಲೆಕ್ಸ್ ಗಳನ್ನ ತಮ್ಮ ತೋಟದ ಸುತ್ತಲೂ ಹಾಕಿದ್ದು, ಮಂಗಗಳು ತಮ್ಮ ತೋಟದತ್ತ ಸುಳಿಯದಂತೆ ನೋಡಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.
ಮುಖ್ಯವಾಗಿ ಚಾರ್ಮಾಡಿ ಘಾಟ್ ಹತ್ತಿರದಲ್ಲಿ ಇರೋದ್ರಿಂದ ಮಂಗಗಳ ಕಾಟ ಈ ಭಾಗದಲ್ಲಿ ಮಿತಿ ಮೀರಿದೆ. ಹಾಗಾಗೀ ಚಾರ್ಮಾಡಿ ಘಾಟ್ ಸುತ್ತಮುತ್ತಲಿನ ರೈತರು, ವಾನರ ಸೇನೆಯಿಂದ ಹೈರಾಣಾಗಿ ಹೋಗಿದ್ದಾರೆ.. ಸದ್ಯ ಹುಲಿ ಫ್ಲೆಕ್ಸ್ ಗಳನ್ನ ತೋಟದಲ್ಲಿ ಹಾಕಿ ಮಂಗಗಳ ಕಾಟದಿಂದ ಮುಕ್ತಿ ಪಡೆದು ಕೊಂಡಿದ್ದಾರೆ ಜನ್ರು..
ಮಲೆನಾಡಿನ ಕಾಫಿ ತೋಟಗಳಿಗೆ ಮಂಗಗಳು ಎಂಟ್ರಿಯಾಗದಂತೆ ಡುಪ್ಲಿಕೇಟ್ ಹುಲಿರಾಯ ಪಹರೆಗೆ ನಿಂತಿರೋದು ಕಾಫಿ ತೋಟದ ಮಾಲೀಕರಿಗೆ ಖುಷಿ ಕೊಟ್ಟಿದೆ. ಕೇವಲ ಕೋತಿಗಳಲ್ಲದೇ ಕಾಡಾನೆಗಳು ಕೂಡ ಹುಲಿರಾಯನ ಸಾವಾಸ ನಮಗೆ ಬೇಡ ಕಾಫಿ ತೋಟಕ್ಕೆ ಎಂಟ್ರಿನೇ ಕೊಡ್ತಿಲ್ಲ. ಒಟ್ಟಿನಲ್ಲಿ ಕೋತಿಗಳು ನಾಡಿನ ಕಡೆಗೆ ಬಾರದಂತೆ ತಡೆಹಿಡಿಯಲಾಗದೇ ಹೈರಾಣಾಗಿದ್ದ ಅರಣ್ಯ ಸಿಬ್ಬಂದಿಗಳಿಗೆ, ರೈತರ ಹೊಸ ಪ್ಲಾನ್ ಕೊಂಚ ರಿಲೀಫ್ ನೀಡಿರೋದಂತೂ ಸುಳ್ಳಲ್ಲ.