ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಹೃದಯಾಘಾತದಿಂದ ನಿಧನ..!
ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ(67) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಂದ್ರಕಾಂತ ಕರದಳ್ಳಿ ನಿಧನರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಕಾಂತ ಕರದಳ್ಳಿ ಅವರು ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿತ್ತು. ಇವರಿಗೆ ‘ಕಾಡು ಕನಸಿನ ಬೀಡಿಗೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ 1952ರ ಆಗಸ್ಟ್ 25ರಂದು ಜನಿಸಿದ್ದು, ತಂದೆ ರಾಚಯ್ಯಸ್ವಾಮಿ ಕರದಳ್ಳಿ, ತಾಯಿ ಮುರಿಗೆಮ್ಮ ದಂಪತಿಯ ಪುತ್ರ. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.