ಹೊಸ ವರ್ಷದ ಎಫೆಕ್ಟ್ : ಬೆಳ್ಳಂಬೆಳಿಗ್ಗೆ ಬೆತ್ತಲೆ ಕುಣಿದ ಭೂಪ – ವಾಯು ವಿಹಾರಿಗಳು ಶಾಕ್
ಹೊಸ ವರ್ಷದ ಎಣ್ಣೆಯ ಎಫೆಕ್ಟೋ ಎನೋ ಗೊತ್ತಿಲ್ಲ. ಯುವಕನೊಬ್ಬ ಬೆಳ್ಳಂಬೆಳಿಗ್ಗೆ ಬೆತ್ತಲೆಯಾಗಿ ಕುಣಿಯುವ ಮೂಲಕ ವಾಯು ವಿಹಾರಿಗಳಿಗೆ ಕಿರಕ್ ಮಾಡಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ, ನಿವಾಸ ಮತ್ತು ಪ್ರಾಚೀನ ಸ್ಮಾರಕ ಗಗನ ಮಹಲ ಬಳಿ ಪ್ರತಿ ದಿನ ಬೆಳ್ಳಂಬೆಳಿಗ್ಗೆ ನೂರಾರು ಜನ ವಾಯು ವಿಹಾರಕ್ಕಾಗಿ ಬರುತ್ತಾರೆ. ಇಂದು ಹೊಸ ವರ್ಷದ ದಿನ ಅವರು ಎಂದೂ ನಿರೀಕ್ಷಿಸದ ದೃಷ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಅನಾಮಿಕ ಯುವಕನೊಬ್ಬ ಬೆತ್ತಲೆಯಾಗಿ ಓಡಾಡಿದ್ದಾನೆ. ಬೆಳಗಿನ ಜಾವದಲ್ಲಿ ರಸ್ತೆ ಮೇಲೆ ಬೆತ್ತಲೆಯಾಗಿ ಕುಣಿದ ಭೂಪ ರೂಪ ಕಂಡು ಅಲ್ಲಿಗೆ ವಾಯು ವಿಹಾರಕ್ಕೆ ಬರುವ ಜನರು ಬೆಚ್ಚಿ ಬಿದ್ದಿದ್ದಾರೆ. ಹುಚ್ಚನಂತೆ ಕುಣಿದಾಡಿದ ಅನಾಮಿಕ ವ್ಯಕ್ತಿ ಮರಾಠಿ ಭಾಷೆಯಲ್ಲಿ ಚೀರಾಡುತ್ತಿದ್ದ ಎನ್ನಲಾಗಿದೆ.
ಆಗ ಸಿಟ್ಟಾದ ವಾಯು ವಿಹಾರಿಗಳು ಬಟ್ಟೆ ತೊಟ್ಟುಕೊಳ್ಳುವಂತೆ ಹೇಳಿದರೂ ಆತ ಬಟ್ಟೆ ಹಾಕಿಕೊಳ್ಳಲು ನಿರಾಕರಿಸಿದ್ದಾನೆ. ಬಳಿಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆತ ರಟ್ಟಿನ ಬಾಕ್ಸ್ ಸೊಂಟಕ್ಕೆ ಸುತ್ತಿಕೊಂಡಿದ್ದಾನೆ. ಕುಡದ ಅಮಲಿನಲ್ಲಿ ಬೆತ್ತಲೆ ಕುಣಿದಾಡಿದ್ದಾನೋ ಅಥವಾ ಬುದ್ದಿಭ್ರಮಣೆಯಾಗಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ ಎಂದು ವಾಯ ವಿಹಾರಿ ಅನಿಲ ದಾನಿ ತಿಳಿಸಿದ್ದಾರೆ.
ಹೊಷ ವರ್ಷದ ಮೊದಲ ದಿನ ಗಗನ ಮಹಲ ಮತ್ತು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ಬರುವ ವಾಯು ವಿಹಾರಿಗಳಿಗೆ ಪುಂಡನ ನಗ್ನಾವಸ್ಥೆ ಬೆಚ್ಚಿ ಬೀಳಿಸುವಂತೆ ಮಾಡಿದೆ.