Lock down : ವಾಣಿಗ್ಯೋದ್ಯಮ ಮತ್ತೆ ಚಿಗಿತುಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ..
ಕೊರೋನಾ ವಿರುದ್ಧದ ಸಮರದ ಅಂಗವಾಗಿ ಭಾರತ ಎರಡನೇ ಹಂತದ ಸ್ಥಗಿತ ಪರ್ವದಲ್ಲಿದ್ದು ಈಗಾಗಲೇ ಆರ್ಥಿಕವಾಗಿ ಸಾಕಷ್ಟು ಪೆಟ್ಟು ತಿಂದಿದೆ. ಇದೇ 20ರ ತರುವಾಯ ಹಂತ ಹಂತವಾಗಿ ವಾಣಿಜ್ಯ ಚಟುವಟಿಕೆಗಳು ಶುರುವಾಗುವ ಸೂಚನೆಗಳಿದ್ದು ವಾಣಿಗ್ಯೋದ್ಯಮ ಮತ್ತೆ ಚಿಗಿತುಕೊಳ್ಳಲು ಕನಿಷ್ಟ 2 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೇಂದ್ರ ಸರಕಾರದ ವಿತ್ತ ಇಲಾಖೆ ಈಗಾಗಲೇ ಅಂದಾಜು ಆರಂಭಿಸಿದ್ದು ದೇಶೀಯ ಔದ್ಯಮಿಕ ರಂಗದ ಪುನಶ್ಚೇತನದ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಈಗಿರುವ ಅಂದಾಜಿನ ಪ್ರಕಾರ ಕನಿಷ್ಟ ಆರು ತಿಂಗಳಿಂದ 24 ತಿಂಗಳವರೆಗಿನ ಅವಧಿ ಉದ್ದಿಮೆಗಳ ಮರುಹೂರಣಕ್ಕೆ ತಗುಲಲಿದ್ದು, ಅವುಗಳಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸರಕಾರ ಕ್ರಿಯಾಶೀಲವಾಗಿದೆ.
ಸರಕಾರದ ಅಂದಾಜಿಸಿರುವಂತೆ ಜವಳಿ, ಪೇಯ-ಪಾನೀಯ, ವಿಮೆ, ಗಣಿ, ಚಿಲ್ಲರೆ ವಹಿವಾಟು ಉದ್ದಿಮೆಗಳು ಚೇತರಿಸಿಕೊಳ್ಳಲು ಕನಿಷ್ಷ ಆರರಿಂದ ಒಂದು ವರ್ಷ ಕಾಲ ತಗುಲಬಹುದು ಎನ್ನಲಾಗಿದೆ. ಇದೇ ರೀತಿ ಮನರಂಜನೆ (ಚಿತ್ರರಂಗ ಸೇರಿ), ಹೋಟೆಲು-ಉಪಚಾರ, ಪ್ರವಾಸ, ಆಟೋಮೊಬೈಲ್, ರಿಯಲ್ ಎಸ್ಟೇಟು ಹಾಗೂ ಗ್ರಾಹಕ ಉತ್ತನ್ನಗಳ ಉದ್ದಿಮೆಗಳು ನಷ್ಟ ಸರಿದೂಗಿಸಲು 12-24 ತಿಂಗಳು ಶ್ರಮಿಸಬೇಕಿದೆ.
ಈ ಹಿನ್ನೆಲಯಲ್ಲಿ ಯಾವ್ಯಾಯ ಕ್ಷೇತ್ರಗಳಿಗೆ ಆರ್ಥಿಕ ಸಹಾಯದ ಎಷ್ಟೆಷ್ಟು ಅವಶ್ಯಕತೆ ಇದೆ ಎಂಬುದರ ಬಗ್ಗೆ ಹಣಕಾಸು ಇಲಾಖೆ ಲೆಕ್ಕಾಚಾರ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ಲಾಕ್ಡೌನ್ ಜಾರಿ ನಂತರ ಕೇಂದ್ರ ಸರಕಾರ ಈಗಾಗಲೇ 1.75 ಲಕ್ಷ ಕೊಟಿ ರೂಗಳ ಆರ್ಥಿಕ ಪುನಶ್ಚೇತನಾ ಯೋಜನೆ ಘೋಷಿಸಿದ್ದು ಬಡವರು, ಕೂಲಿ ಕಾರ್ಮಿಕರು, ರೈತರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಇದು ಮೀಸಲಾಗಿದೆ.
ಮುಂಬರು ದಿನಗಳಲ್ಲಿ ಸರಕಾರವು ಇತರ ರಂಗಗಳಿಗೂ ಕೂಡ ಹಣಕಾಸಿನ ನೆರವು ಘೋಷಣೆ ಮಾಡುವ ನಿರೀಕ್ಷೆ ಗರಿಗೆದರಿದೆ. ಈ ನಿಟ್ಟಿನಲ್ಲಿ ಸರಕಾರ ಸಹ ಕಾರ್ಯೋನ್ಮುಖವಾಗಿದೆ ಎಂದೂ ಹೇಳಲಾಗಿದೆ. ಬ್ಯಾಂಕುಗಳ ಮೂಲಕ ಸುಲಭ ಸಾಲ ನೀಡಿಕೆ, ಸಾಲ ವಸೂಲಾತಿ ಕ್ರಮಗಳಲ್ಲಿ ಸುಧಾರಣೆ, ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಸರಕಾರ ಗಮನ ಹರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.