Maharashtra cabinet : ಕುಟುಂಬ ರಾಜಕಾರಣದ ಪರಾಕಾಷ್ಠೆ ತಲುಪಿದ ಮಹಾ ಕ್ಯಾಬಿನೆಟ್….
ಬಿಜೆಪಿ ವಿರುದ್ಧ ಸಡ್ಡು ಹೊಡೆದು ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿ ಅಧಿಕಾರದ ಗದ್ದುಗೆ ಏರಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಸಂಪುಟವೀಗ ನಾನಾ ರಾಜಕೀಯ ಕುಟುಂಬ ಪ್ರತಿನಿಧಿಗಳ ಮಹಾ ಸಂಗಮವಾಗಿದೆ.
ಎರಡು ದಿನಗಳ ಹಿಂದಷ್ಟೇ ಸಂಪುಟ ವಿಸ್ತರಿಸಿದ ಉದ್ಧವ್ ಠಾಕ್ರೆ ತಮ್ಮ ಸಂಪುಟಕ್ಕೆ 43 ಸದಸ್ಯರನ್ನು ನೇಮಕ ಮಾಡಿಕೊಂಡರು. ಈ 43 ಸಚಿವರ ಪೈಕಿ 19 ಮಂದಿ ಕುಟುಂಬ ರಾಜಕಾರಣದ ಪ್ರತಿನಿಧಿಗಳಾಗಿದ್ದಾರೆ. ಒಂದಿಲ್ಲೊಂದು ರಾಜಕೀಯ ಕುಟುಂಬದ ಶ್ರೀರಕ್ಷೆ ಪಡೆದಿದ್ದಾರೆ.
ಇದರಲ್ಲಿ 12 ಸಚಿವ ಸ್ಥಾನ ಪಡೆದ ಕಾಂಗ್ರೆಸ್ ಮುಂಚೂಣಿಯಲ್ಲಿದ್ದರೇ ಎನ್ಸಿಪಿ ಮತ್ತು ಶಿವಸೇನೆ ನಂತರದ ಸ್ಥಾನಗಳಲ್ಲಿವೆ. ವಿಪರ್ಯಾಸವೆಂದರೆ ಅಧಿಕಾರ ರಾಜಕಾರಣದಿಂದ ದೂರವೇ ಉಳಿದಿದ್ದ ಠಾಕ್ರೆ ಕುಟುಂಬದಿಂದ ಅಪ್ಪ ಮುಖ್ಯಮಂತ್ರಿಯಾದರೇ ಮಗ ಡೆಪ್ಯೂಟಿ ಮಂತ್ರಿಯಾಗಿದ್ದಾರೆ.
ಈ ಸಂಪುಟದಲ್ಲಿ ಚವಾಣ್, ಪವಾರ್, ಠಾಕ್ರೆ, ತೋರಟ್, ಮುಂಡೆ, ಪಾಟೀಲ್, ದೇಶಮುಖ್, ತತ್ಕರೆ, ತಾನ್ಪುರೆ… ಹೀಗೆ ಕುಟುಂಬ ರಾಜಕೀಯದ ವಿವಿಧ ಮಂದಿ ಸ್ಥಾನ ಪಡೆದಿದ್ದಾರೆ. ಈ ಮಧ್ಯೆ ಸೋಮವಾರ ನಡೆದ ಸಂಪುಟ ವಿಸ್ತರಣೆಯ ನಂತರ ಮೂರು ಪಕ್ಷಗಳಲ್ಲಿ ಅತೃಪ್ತೀ ಸ್ಫೋಟಗೊಂಡಿದ್ದು, ಈಗದು ಉಚ್ಛ್ರಾಯ ಸ್ಥಿತಿ ತಲುಪಿದೆ.