ಕರ್ನಾಟಕದಲ್ಲಿ ಕೊರೊನಾ ಸಾವಿನ ಸಂಖ್ಯೆ 114; ನಿನ್ನೆ ಬೆಂಗಳೂರಿನಲ್ಲಿ ಪತ್ರಕರ್ತ ಸೇರಿ 08 ಸಾವು
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಂತೆಯೇ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿನ್ನೆ (ಗುರುವಾರ) ಒಂದೇ ದಿನ ರಾಜ್ಯದಲ್ಲಿ 12 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅಲ್ಲದೆ, ಸಾವಿಗೀಡಾದ ಸೋಂಕಿತರಲ್ಲಿ ಬೆಂಗಳೂರು ನಗರ ಒಂದರಲ್ಲೇ 08 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಇದೂವರೆಗೂ ಒಂದು ದಿನ 10 ಸಾವು ವರದಿಯಾಗಿತ್ತು. ಗುರುವಾರ 12 ಮಂದಿ ಸಾವಿಗೀಡಾಗಿದ್ದು, ದಿನದ ಸಾವಿನ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಇದೂವರೆಗೂ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 114ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 844 ಸೋಂಕಿತರಲ್ಲಿ ಒರೋಬ್ಬರಿ 51 ಮಂದಿ ಮೃತಪಟ್ಟಿದ್ದು ಸಾವಿನ ದರ ಶೇ.6.4ಕ್ಕೆ ಏರಿಕೆಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಕಳೆದ 18 ದಿನಗಳಲ್ಲಿ 64 ಮಂದಿ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಕಳೆದ 3 ದಿನಗಳಲ್ಲೇ ಬರೋಬ್ಬರಿ 18 ಮಂದಿ ಮೃತಪಟ್ಟಿದ್ದಾರೆ. ವಿಜಯ ಕರ್ನಾಟಕ ಪತ್ರಕರ್ತ ಗೌರೀಪುರ ಚಂದ್ರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಪರೀಕ್ಷೆಯ ನಂತರ ಅವರಲ್ಲಿಯೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನೂ ಸೇರಿದಂತೆ ಗುರುವಾರ ಬೆಂಗಳೂರಿನಲ್ಲಿ 8, ಬೀದರ್, ವಿಜಯಪುರ, ಕಲಬುರಗಿ, ಕೊಪ್ಪಳದಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಈ ಪೈಕಿ ಜೂ.6 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದ 57 ವರ್ಷದ ಸೋಂಕಿತ ವ್ಯಕ್ತಿಯ ಸಾವನ್ನು 12 ದಿನಗಳ ಬಳಿಕ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.
ಬೀದರ್ ನಲ್ಲಿ ಕಂಟೈನ್ಮೆಂಟ್ ಝೋನ್ ನಲ್ಲಿ ರ್ಯಾಂಡಮ್ ಪರೀಕ್ಷೆ ವೇಳೆ ಜೂ.8ರಂದು ಸೋಂಕು ಖಚಿತಪಟ್ಟಿದ್ದ 55 ವರ್ಷದ ಮಹಿಳೆ ಜೂ.18 ರಂದು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ತೀವ್ರ ಉಸಿರಾಟ ತೊಂದರೆ ಹಿಂದಿದ್ದ 66 ವರ್ಷದ ಮಹಿಳೆ ಜೂ.15ರಂದು ಆಸ್ಪತ್ರೆಗೆ ದಾಖಲಾಗಿ 17 ರಂದು ಮೃತರಾಗಿದ್ದಾರೆ.
ಕಲಬುರಗಿಯಲ್ಲಿ ಜ್ವರ, ಉಸಿರಾಟ ಸಮಸ್ಯೆಯಿಂದ ಜೂ.13ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ವ್ಯಕ್ತಿ ಜೂ.15ರಂದು ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ತೀವ್ರ ಉಸಿರಾಟ ತೊಂದರೆ ಕೆಮ್ಮು,ಜ್ವರದ ಹಿನ್ನೆಲೆಯೊಂದಿಗೆ ಜೂ.13ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ಮಹಿಳೆ ಜೂ.17ರಂದು ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.