ಕಾಂಗ್ರೆಸ್ಗೆ ಡಿಕೆಶಿ ಅಧ್ಯಕ್ಷರಾದರೆ, ಬಿಜೆಪಿಗೇ ಅನುಕೂಲ; ಡಾ.ಕೆ ಸುಧಾಕರ್
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರಿ ಸ್ವೀಕಾರ ಮಾಡುವುದರಿಂದ ಬಿಜೆಪಿಗೆ ಲಾಭವೇ ಹೊರತು ಕಾಂಗ್ರೆಸ್ಸಿಗಲ್ಲ. ಡಿಕೆಶಿಯಿಂದ ಬಿಜೆಪಿ ಮತ್ತಷ್ಟು ಸದೃಢವಾಗಲಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ ಎಂಬುದು ಸಾಬೀತಾಗಿದೆ ಎಂದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತಲವು ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗ ಕಾಂಗ್ರೆಸ್ ಏನಾಗಿತ್ತು ಎಂದು ನೋಡಿದ್ದೇವೆ. ಈಗ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಏನೇ ಆಗಲೀ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಶುಭಾಶಯಗಳು ಕೋರುತ್ತೇನೆ ಎಂದು ಸುಧಾಕರ್ ಟಾಂಗ್ ನೀಡಿದರು.
ಹೀಗೆ ಮುಂದುವರಿದ ಅವರು, ಯಾರೇ ಆಗಲೀ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡದೇ ಅಮಾನವೀಯವಾಗಿ ನಡೆದುಕೊಂಡಲ್ಲಿ ಸರ್ಕಾರ ಕಠಿಣಕ್ರಮ ತೆಗೆದುಕೊಳ್ಳಲಿದೆ. ಖಾಸಗಿ ಆಸ್ಪತ್ರೆ ಲೈಸನ್ಸ್ ಅನ್ನೇ ರದ್ದುಗೊಳಿಸುತ್ತೇವೆ. ಅಂತವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಇನ್ನು, ಈಗಾಗಲೇ ತಜ್ಞರು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅದರಂತೆಯೇ ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಲಾಕ್ಡೌನ್ ಬಗ್ಗೆ ತಜ್ಞರು ಏನು ಅಭಿಪ್ರಾಯ ತಿಳಿಸಿಲ್ಲ. ಲಾಕ್ಡೌನ್ನಿಂದ ಕೋವಿಡ್-19 ಹೋಗಲ್ಲ. ಸದ್ಯ ಕಠಿಣ ಕ್ರಮಗಳೊಂದಿಗೆ ಕೊವೀಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರಾಜಕೀಯ ಮಾಡಬಾರದು, ಬದಲಿಗೆ ಸಲಹೆ ನೀಡಬೇಕು. ಅದು ಬಿಟ್ಡು ಮೊಸರಲ್ಲಿ ಕಲ್ಲು ಹುಡುಕೋದು ಸರಿಯಲ್ಲ. ಕೊರೋನಾ ನಿಯಂತ್ರಣ ಸಂಬಂಧ ಕೇರಳಕ್ಕೆ ನಮ್ಮ ರಾಜ್ಯವನ್ನು ಹೋಲಿಸೋದು ಸರಿಯಲ್ಲ. ನಾನು ವೈದ್ಯಕೀಯ ಮಂತ್ರಿಯಾಗಿ ಕೇವಲ ನಾಲ್ಕು ತಿಂಗಳಾಗಿದೆ. ಈ ಹಿಂದೆ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದವರೇನು ಮಾಡಿದ್ರು? ಆರೋಗ್ಯ ವ್ಯವಸ್ಥೆ ಏನು ಸುಧಾರಣೆ ಕಂಡಿದೆ ಎಂದು ಸುಧಾಕರ್ ಎಚ್ಡಿಕೆ ಪ್ರಶ್ನೆ ಹಾಕಿದರು.