ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಲು ಸ್ವಯಂ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ ಬಿಜೆಪಿ ಶಾಸಕ!
ಸ್ವಾರ್ಥ ರಾಜಕಾರಣ, ಭ್ರಷ್ಟಾಚಾರಿ ರಾಜಕಾರಣಿಗಳ ನಡುವೆ ಅಸ್ಸಾಂನ ಶಾಸಕರೊಬ್ಬರು ಮಾನವೀಯತೆ ಮತ್ತು ಜನ ಸೇವೆಗೆ ಮುಂದಾಗಿರುವ ಅಪರೂಪದ ಘಟನೆಗೆ ಅಸ್ಸಾಂನ ಖುಮ್ತೈ ಸಾಕ್ಷಿಯಾಗಿದೆ. ಬಿಜೆಪಿ ಶಾಸಕ ಸೈಕಿಯಾ ಅವರು ಪ್ರವಾಹದಿಂದಾಗಿ 24 ಜಿಲ್ಲೆಗಳ 2,015 ಹಳ್ಳಿಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸಲು ಸೊಟದ ಆಳದಷ್ಟು ನೀರಿಗಿಳಿದು ವಾಲೆಂಟಿಯರ್ರಾಗಿ ಕೆಲಸ ಮಾಡಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹಟಿಯಿಂದ ಸುಮಾರು 264 ಕಿ.ಮೀ ದೂರದಲ್ಲಿರುವ ಖುಮ್ತೈ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಸೈಕಿಯಾ ಅವರು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುವ ಮತ್ತು ಪರಿಹಾರ ಕಾರ್ಯಗಳ ವೀಡಿಯೊಗಳನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ನನ್ನ ಕ್ಷೇತ್ರದಲ್ಲಿ ಪ್ರವಾಹವು ಹಾನಿಯನ್ನುಂಟುಮಾಡುತ್ತಿದೆ.. ಪ್ರವಾಹದಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸುತ್ತಿದ್ದೇವೆ… ಹಳ್ಳಿಯ ಆರ್ಥಿಕತೆಗೆ ಜಾನುವಾರುಗಳು ಬಹಳ ಮುಖ್ಯ. ಸಿಕ್ಕಿಬಿದ್ದ ನೂರಾರು ಆಡುಗಳನ್ನು ಅನೇಕ ಸ್ಥಳಗಳಿಂದ ಉಳಿಸಲಾಗಿದ್ದು, ನನಗೆ ಸಂತೋಷವಾಗಿದೆ” ಎಂದು ಸೈಕಿಯಾ ಟ್ವೀಟ್ ಮಾಡಿದ್ದಾರೆ.
Flood is creating havoc in my constituency..we have been rescuing stranded people from interior places. pic.twitter.com/pNqOTKYuS5
— Mrinal Saikia (@MrinalS66742364) July 12, 2020
ಸೈಕಿಯಾ ಅವರ ಕೆಲಸವು ಹೆಚ್ಚಿನ ರಾಜಕಾರಣಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಒಬ್ಬ ವ್ಯಕ್ತಿಯು ಹೇಳಿದ್ದರೆ, ಮತ್ತೊಬ್ಬರು ಶಾಸಕರು ಪ್ರವಾಹಕ್ಕೆ ಒಳಗಾದ ಹಳ್ಳಿಯೊಂದರ ಮೂಲಕ ಸಾಗುತ್ತಿರುವಾಗ ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಇಂದು, ಸೈಕಿಯಾ ಅವರು ಕೆಲವು ಪ್ರದೇಶಗಳಲ್ಲಿ ಪ್ರವಾಹದ ನೀರು ಕಡಿಮೆಯಾಗುತ್ತಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಅಸ್ಸಾಂನ ಧೆಮಾಜಿ, ಬಾರ್ಪೆಟಾ ಮತ್ತು ಲೋವರ್ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಭಾನುವಾರ, ಅಸ್ಸಾಂನಲ್ಲಿನ ಪ್ರವಾಹಕ್ಕಿ ಸಿಲುಕಿ 44 ಜನರು ಮತ್ತು ಭೂಕುಸಿತದಿಂದಾಗಿ 26 ಜನರು ಪ್ರಾಣಕಳೆದುಕೊಂಡಿದ್ದು, ಒಟ್ಟು 70 ಜನರು ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಒಡ್ಡುಗಳನ್ನು ರಿಪೇರಿ ಮಾಡಲು ಆದೇಶಿಸಿದ್ದಾರೆ. ಸೋನೊವಾಲ್ ಅವರು ಎಲ್ಲಾ ಶಾಸಕರು ಮತ್ತು ಸಂಸದರನ್ನು ಪ್ರವಾಹ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಲು ಕೇಳಿಕೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಅಸ್ಸಾಂನಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ 21,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.