ಮೋದಿ ಸರ್ಕಾರದ ಹೇಡಿತನದ ಕ್ರಮಗಳಿಂದ ಭಾರತ ಬೆಲೆ ತೆರಬೇಕಾಗಿದೆ: ರಾಹುಲ್ಗಾಂಧಿ
ಕೊರೊನಾ ಲಾಕ್ಡೌನ್, ಕೊರೊನಾ ಹರಡುವಿಕೆಯ ನಿಯಂತ್ರಣ, ಭಾರತ- ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಟೀಕಾ ಪ್ರಹಾರ ನಡೆಸುತ್ತಲೇ ಇದ್ದಾರೆ. ಭಾರತ-ಚೀನಾ ಸಂಘರ್ಷದ ಬಗ್ಗೆ ಮತ್ತೆ ವಾಗ್ದಾಳಿ ನಡೆಸಿರುವ ರಾಹುಲ್ಗಾಂಧಿ ಸರ್ಕಾರದ ಹೇಡಿತನದ ಕ್ರಮಗಳಿಂದ ಭಾರತ ಭಾರೀ ಬೆಲೆ ತೆರಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.
‘ಚೀನಾ ನಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ಭಾರತ ಸರ್ಕಾರ ಚೇಂಬರ್ಲೇನ್ ವರ್ತಿಸುತ್ತಿದೆ. ಇದು ಚೀನಾದಲ್ಲಿ ಮತ್ತಷ್ಟು ಧೈರ್ಯ ತುಂಬುತ್ತದೆ. ಕೇಂದ್ರ ಸರ್ಕಾರದ ಹೇಡಿತನದ ಕ್ರಮಗಳಿಂದಾಗಿ ಭಾರತ, ಭಾರೀ ಬೆಲೆ ತೆರಲಿದೆ’ ಎಂದು ರಾಹುಲ್ಗಾಂಧಿ ಟ್ವೀಟ್ ಮಾಡಿದ್ದಾರೆ.
1930 ರ ದಶಕದಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ಜರ್ಮನಿಯ ಬಗ್ಗೆ ಓಲೈಸು ನೀತಿಯನ್ನು ಅನುಸರಿಸಿದ ದಿವಂಗತ ಬ್ರಿಟಿಷ್ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ಅವರನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
China has taken our land and GOI is behaving like Chamberlain. This will further embolden China.
India is going to pay a huge price because of GOI’s cowardly actions. pic.twitter.com/5ewIFvj5wy
— Rahul Gandhi (@RahulGandhi) July 18, 2020
ಲಡಾಖ್ ಮತ್ತು ಶ್ರೀನಗರಕ್ಕೆ 2 ದಿನಗಳ ಭೇಟಿಯಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇಹ್ಗೆ ಆಗಮಿಸಿದ್ದು, ಟಿ -90 ಟ್ಯಾಂಕ್ಗಳು ಮತ್ತು ಯುದ್ಧ ವಾಹನಗಳ ವ್ಯಾಯಾಮ, ಕಸರತ್ತನ್ನು ಲೇಹ್ನ ಸ್ಟಕ್ನಾದಲ್ಲಿ ವೀಕ್ಷಿಸಿದರು.
ಲುಕುಂಗ್ ಫಾರ್ವರ್ಡ್ ಬೇಸ್ನಲ್ಲಿರುವ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಐಟಿಬಿಪಿಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಸಿಂಗ್, “ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಆದರೆ ಅದನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡಬಲ್ಲೆ, ನಮ್ಮ ಭೂಮಿಯ ಒಂದು ಇಂಚು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲಾಗುವುದಿಲ್ಲ. ಮಾತುಕತೆಯಿಂದ ಪರಿಹಾರವನ್ನು ಕಂಡುಹಿಡಿಯಬಹುದಾದರೆ, ಇದಕ್ಕಿಂತ ಉತ್ತಮ ಅವಕಾಶ ಬೇರೆ ಏನು ಇಲ್ಲ ಎಂದು ಹೇಳಿದ್ದರು.