ನಿಗಮ ಮಂಡಳಿಗಳ ನೇಮಕಾತಿ ವಿಷಯಕ್ಕೆ ಸಂಬಮಧಿಸಿದಂತೆ ಕಾಂಗ್ರೆಸ್ ಶಿಫಾರಸುಗಳಲ್ಲಿ ಕೆಲವರ ಹೆಸರನ್ನು ತಿರಸ್ಕರಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮೂರು ರಾಜ್ಯಗಳಲ್ಲಿ ಜಯದ ಬಳಿಕ ಕಾಂಗ್ರೆಸ್ ಯಜಮಾನಿಕೆ ತೋರಲು ಮುಂದಾಗಿದ್ದು, ಇದು ನಡೆಯಲ್ಲ ಎಂಬ ಎಚ್ಚರಿಕೆಯ ಸಂದೇಶ ನೀಡಲೆಂದೇ ಹೀಗೆ ಮಾಡಿದ್ದಾರೆ ಎನ್ನಲಾಗಿದೆ.
ಅದರಲ್ಲಿಯೂ ತಿರಸ್ಕೃತರ ಪಟ್ಟಿಯಲ್ಲಿ ಇರುವ ಬಹುತೇಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರೆಂದೇ ಗುರುತಿಸಿಕೊಂಡಿರುವುದು ಕುಮಾರಸ್ವಾಮಿ ಅವರ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ಸದಾ ಸರಕಾರವನ್ನು ಟೀಕಿಸುವವರಿಗೆ ಅಧ್ಯಕ್ಷಗಿರಿ ಕೊಡಲು ಸಾಧ್ಯವಿಲ್ಲ. ಅಧ್ಯಕ್ಷರ ನೇಮಕ ಶಿಫಾರಸಿಗೆ ಮುನ್ನ ಹೆಸರುಗಳನ್ನು ಚರ್ಚಿಸಬೇಕಿತ್ತು ಎಂಬ ಸಂದೇಶವೂ ಇದರಲ್ಲಿ ಅಡಕವಾಗಿದೆ.
ಕಾಂಗ್ರೆಸ್ ಶಿಫಾರಸು ಮಾಡಿದ್ದ ಶಾಸಕರ ಪೈಕಿ ಐದು ನಿಗಮ-ಮಂಡಳಿ ಹಾಗೂ ಒಂದು ರಾಜಕೀಯ ಕಾರ್ಯದರ್ಶಿ ಸ್ಥಾನದ ಶಿಫಾರಸನ್ನು ಕುಮಾರಸ್ವಾಮಿ ಒಪ್ಪಿಲ್ಲ.
ನಿಗಮ-ಮಂಡಳಿ ಪಟ್ಟಿಯಲ್ಲಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಅಧಿಕಾರ ಭಾಗ್ಯ ದೊರಕಿಲ್ಲ.
ಇದೇ ರೀತಿ ಸಂಸದೀಯ ಕಾರ್ಯದರ್ಶಿಯಾಗಿ ಶಿಫಾರಸುಗೊಂಡಿದ್ದ ವಿ. ಮುನಿಯಪ್ಪ ಅವರ ನೇಮಕಕ್ಕೂ ಸಿಎಂ ಅಸ್ತು ಎಂದಿಲ್ಲ. ಏನೇ ಆಗಲಿ ಕುಮಾರಸ್ವಾಮಿ ಅವರ ಈ ನಿರ್ಧಾರ ಸಾಕಷ್ಟು ಸಂಚಲನ ಮೂಡಿಸಿರುವುದಂತೂ ಸತ್ಯ.