ಕೊರೊನಾ ಕಾಲದಲ್ಲಿ ಶಿಕ್ಷಣದಿಂದ ದೂರ ಉಳಿದ ಮಕ್ಕಳ ಸಮೀಕ್ಷೆ ಮಾಡಿ: ಡಿಕೆಶಿ ಒತ್ತಾಯ
ಕೊರೊನಾದಿಂದ ಬಂದ್ ಆಗಿರುವ ಶಾಲೆಗಳು ಇಂದಿಗೂ ತೆರೆದಿಲ್ಲ. ಆನ್ಲೈನ್ ಶಿಕ್ಷಣ ವ್ಯವಸ್ಥೆ ಮಾಡಲಾಗಿದ್ದರೂ ಸೌಲಭ್ಯಗಳ ಕೊರತೆಯಿಂದ ಶೇ.50ಕ್ಕೂ ಹೆಚ್ಚು ಮಕ್ಕಳು ಆನ್ಲೈನ್ ಶಿಕ್ಷಣದಿಂದ ಹೊರಗುಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಖಾಸಗೀ ಶಾಲೆಗಳಲ್ಲಿ ಈಗಾಗಲೇ ದಾಖಲಾತಿ ನಡೆದಿದ್ದು, ಲಾಕ್ಡೌನ್ ಎಫೆಕ್ಸ್ನಿಂದ ಸಂಕಷ್ಟಕ್ಕೀಡಾಗಿರುವ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಹಿಂದಿನ ವರ್ಷ ಸೇರಿಸಿದ್ದ ಶಾಲೆಗಳಿಗೆ ಸೇರಿಸಲು ವಿಫಲರಾಗಿದ್ದಾರೆ.
ಅಲ್ಲದೆ, ಇನ್ನೂ ಬಹು ಸಂಖ್ಯೆಯ ಮಕ್ಕಳು ಶಾಲೆಯನ್ನೇ ಬಿಟ್ಟಿದ್ದು, ಶಿಕ್ಷಣದಿಂದ ಹೊರಗುಳಿದಿದ್ದಾರೆ. ಹೀಗಾಗಿ ಶಾಲೆ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಅಥವಾ ದೂರ ಉಳಿದಿರುವ ಮಕ್ಕಳ ಸಮೀಕ್ಷೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ವವಸ್ಥೆ ಹಳ್ಳಹಿಡಿಯುತ್ತಿದೆ. ಉತ್ತಮ ಶಿಕ್ಷಣ ಒದಗಿಸಲು ಮತ್ತು ತರಗತಿಗಳನ್ನು ಸರಿಯಾಗಿ ನಡೆಸಲು ಹಾಗೂ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು. ಆ ಮೂಲಕ ಮಕ್ಕಳ ಪೌಷ್ಟಿಕತೆ ಕಾಪಾಡಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿಯುತ್ತಿರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಬಡ್ಡಿ ರಹಿತ ಸಾಲ ನೀಡುವ ಮೂಲಕ ಶಾಲೆಗಳ ಆರ್ಥಿಕ ಸಾಮರ್ಥ್ಯ ಹೆಚ್ಚಿಸಬೇಕು. ಖಾಸಗಿ ಶಾಲೆಗಳಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಖಾಸಗಿ ಶಾಲೆಗಳಲ್ಲಿ ಮಕ್ಕಳ ಹೆಚ್ಚಿನ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರವು PFI ಮತ್ತು SDPI ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆದಿತ್ತೇ? ಡೀಟೇಲ್ಸ್