ನ್ಯಾಷನಲ್ ಲಾ ಸ್ಕೂಲ್ನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಮೀಸಲಾತಿ ನೀಡುವಂತೆ ಕರ್ನಾಟಕ ವಿಧಾನಸಭೆ ಜಾರಿಗೆ ತಂದ ತಿದ್ದುಪಡಿ ಕಾಯ್ದೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ರವಿ ಹೊಸ್ಮನಿ ಅವರನ್ನೊಳಗೊಂಡ ವಿಭಾಗೀಯ ಪೀಠವು ತಿದ್ದುಪಡಿಯ ವಿರುದ್ಧಅರ್ಜಿಗಳನ್ನು ಆಲಿಸಿದ ನಂತರ ಎನ್ಎಲ್ಎಸ್ಐಯು (ತಿದ್ದುಪಡಿ) ಕಾಯ್ದೆ 2020 ಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಹೊಸ ಸೀಟುಗಳ ಪಟ್ಟಿ ಸಿದ್ಧಪಡಿಸುವಂತೆ ಎನ್ಎಲ್ಎಸ್ಐಯುಗೆ ನಿರ್ದೇಶನ ನೀಡಿದ್ದು, ಸೀಟುಗಳ ಸಂಖ್ಯೆಯನ್ನು 80 ರಿಂದ 120 ಕ್ಕೆ ಹೆಚ್ಚಿಸುವ ಸಂಬಂಧ ಯಾವುದೇ ಮಧ್ಯಂತರ ಆದೇಶ ಜಾರಿಗೊಳಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅಲ್ಲದೆ, ಎನ್ಎಲ್ಎಸ್ಐಯು ಸಿದ್ಧಪಡಿಸಿದ ಪ್ರವೇಶ ಪಟ್ಟಿ ತಾತ್ಕಾಲಿಕ ಮತ್ತು ನ್ಯಾಯಾಲಯದ ಅಂತಿಮ ಆದೇಶಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಮನಿಲಯದಲ್ಲಿ ಜಾರಿಗೆ ತಂದಿದ್ದ ಇದೇ ರೀತಿಯ ಮೀಸಲಾತಿ ಸೌಲಭ್ಯವನ್ನು ನ್ಯಾಯಪೀಠ ತಡೆಹಿಡಿದಿತ್ತು ಎಂದು ವಿವರಿಸಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ಕಾಲ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಎನ್ಎಲ್ಎಸ್ಐಯುನಲ್ಲಿ ಶೇ.25 ರಷ್ಟುಮೀಸಲಾತಿ ನೀಡಲು ರಾಜ್ಯ ವಿಧಾನಸಭೆಯು ಕಳೆದ ಮಾರ್ಚ್ ತಿಂಗಳಿನಲ್ಲಿ ಎನ್ಎಲ್ಎಸ್ಐಯು (ತಿದ್ದುಪಡಿ) ಕಾಯ್ದೆ 2020 ಅನ್ನು ಅಂಗೀಕರಿಸಿತು. ಇದರ ವಿರುದ್ಧ ಕಾನೂನು ವಿದ್ಯಾರ್ಥಿಗಳು ಮತ್ತು ಇತರರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.
ಅರ್ಜಿ ಆಲಿಸಿರುವ ಹೈ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಇದನ್ನೂ ಓದಿ: ಕನ್ನಡಿಗರನ್ನು ಬಂಧಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಸರ್ಕಾರ