ಶಸ್ತ್ರಾಸ್ತ್ರಗಳೊಂದಿಗೆ ಭಾರತೀಯ ಗಡಿ ಪ್ರವೇಶಿಸಿದ ಚೀನಾ: ಉದ್ದಟತನವೆಂದ ಭಾರತ
ಮಾನಸ ಸರೋವರ ಬಳಿ ಕ್ಷಿಪಣಿಗಳನ್ನು ನಿರ್ಮಾಣ ಮಾಡಿರುವ ಚೀನಾ ಪಡೆ, ಲಡಾಖ್ನ ಪಂಗೋಂಗ್ ಸರೋವರದ ದಕ್ಷಿಣ ಭಾಗದಲ್ಲಿ ಭಾರತೀಯ ನೆಲೆಗೆ ಅತಿಕ್ರಮಣ ಮಾಡಲು ಪ್ರಯತ್ನಿಸಿತ್ತು. ಭಾರತೀಯ ಸೈನ್ಯವು ಅವರನ್ನು ಹಿಮ್ಮೆಟ್ಟಿದ ನಂತರ, ಮತ್ತೆ ಚೀನೀ ಸೈನ್ಯವು ಗಡಿ ನಿಯಂತ್ರಣ ರೇಖೆಯಲ್ಲಿ ಈಟಿ ಮತ್ತು ಸ್ವಯಂಚಾಲಿತ ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತವಾಗಿರುವ ಫೋಟೋಗಳು ಹೊರಬಿದಿದ್ದು, ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ದೈಹಿಕ ಘರ್ಷಣೆಯಂತೆ ಮತ್ತೆ ಘರ್ಷಣೆಗೆ ಪ್ರರೇಪಿಸಲು ಉದ್ದೇಶಿಸಿರಬಹುದು ಎಂದು ಹೇಳಲಾಗುತ್ತಿದೆ.
ಕಳೆದ ಸೋಮವಾರ ರಾತ್ರಿ ಪಾಂಗೊಂಗ್ ಸರೋವರದ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಕರಣದ ಬಗ್ಗೆ ಭಾರತ ಮತ್ತು ಚೀನಾ ಪರಸ್ಪರ ದೂಷಿಸಿಕೊಂಡಿವೆ. ಭಾರತದ ಗಡಿಯೊಳಗೆ ನುಗ್ಗಲು ಚೀನಾ ಸೇನೆ ಪ್ರಯತ್ನಪಟ್ಟಿತು. ಅದನ್ನು ನಮ್ಮ ಸೈನಿಕರು ಯಶಸ್ವಿಯಾಗಿ ತಡೆದರು. ಚೀನಾವು ಘರ್ಷಣೆಗೆ ಪ್ರಚೋದನೆ ನೀಡುತ್ತಿದ್ದರೂ ಭಾರತದ ಸೈನಿಕರು ಪ್ರಭುದ್ದತೆಯಿಂದ ವರ್ತಿಸುತ್ತಿದ್ದಾರೆಂದು ಭಾರತೀಯ ಸೇನೆ ಹೇಳಿದೆ.
ಪೂರ್ವ ಲಡಾಕ್ನಲ್ಲಿ ತನ್ನ ಗಡಿಯನ್ನು ದಾಟಲು ಯತ್ನಿಸುತ್ತಿರುವ ಚೀನೀ ಸೈನ್ಯ ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿದು ಬಂದಿದೆ. 45 ವರ್ಷಗಳ ನಂತರ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಸೇನೆ ಶಸ್ತ್ರ ಸಜ್ಜಿತವಾಗಿ ಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಈ ಹಿಂದೆ 1975ರಲ್ಲಿ ಚೀನಾದ ಸೇನೆ ವಾಸ್ತವ ರೇಖೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿತ್ತು. ನಂತರ, ಭಾರತ ಮತ್ತು ಚೀನಾ ಸೈನಿಕರು ಗಡಿ ವಾಸ್ತವ ರೇಖೆಯಲ್ಲಿ ಯಾವುದೇ ಸಂಘರ್ಷ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಹಾಗಿಲ್ಲ ಎಂದು 1996 ಮತ್ತು 2005ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಹಾಗಿದ್ದರೂ ಇದೀಗ ಮತ್ತೆ ಚೀನಾ ಸೇನೆ ಶಸ್ತ್ರಾಸ್ತ್ರಗಳೊಂದಿಗೆ ಗಡಿ ಪ್ರವೇಶಿಸಿದೆ.
ಕಳೆದ ವಾರ ರಷ್ಯಾದ ಮಾಸ್ಕೊದಲ್ಲಿ ಭಾರತ ಮತ್ತು ಚೀನಾ ದೇಶದ ರಕ್ಷಣಾ ಸಚಿವರ ಮಧ್ಯೆ ಮಾತುಕತೆ ನಡೆದ ನಂತರ ಈ ಬೆಳವಣಿಗೆಯಾಗಿದೆ. ಇನ್ನು ಇದೇ ಗುರುವಾರ ಮಾಸ್ಕೊದಲ್ಲಿ ವಿದೇಶಾಂಗ ಸಚಿವರುಗಳ ಮಟ್ಟದ ಮಾತುಕತೆ ಸಹ ನಡೆಯಲಿದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ; ಬಿಎಸ್ವೈಗೆ ಎದುರಾದ ಸಂಕಷ್ಟ!