ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್?; ಹಲವು ನಗರಗಳ ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ್!
ರಾಜ್ಯದಲ್ಲಿ ಕೊರೊನಾ ಉಲ್ಬಣಗೊಂಡ ಹಿನ್ನೆಲೆಯಲ್ಲಿಯೂ ಲಾಕ್ಡೌನ್ ವಿಧಿಸುವುದಿಲ್ಲ ಎಂದು ಹೇಳಿದ್ದ ಸರ್ಕಾರ, ಹಲವು ಮಾರ್ಗಸೂಚಿಗಳೊಂದಿಗೆ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂಗಳನ್ನು ಜಾರಿಗೆ ತಂದಿತ್ತು. ಆದರೆ, ಇದೀಗ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲಿ ಪೊಲೀಸರು ವ್ಯಾಪಾರ ಮಳಿಗೆಗಳನ್ನು ಮುಚ್ಚಿಸುತ್ತಿದ್ದು, ಅಘೋಷಿತ ಲಾಕ್ಡೌನ್ ಜಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ನಡೆದ ರಾಜ್ಯಪಾಲರ ನೇತೃತ್ವದ ಸಭೆಯ ನಂತರ, ಸರ್ಕಾರ ಹಲವು ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಆದರೆ, ಇದೀಗ ಅಂಗಡಿ ಮುಂಗಟ್ಟುಗಳನ್ನು ಏಕಾಏಕಿ ಮುಚ್ಚಿಸಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಹೊರಬಂದ ನಂತರ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸರ್ಕಾರ ಅಧಿಕೃತವಾಗಿ ಬಂದ್ ಮಾಡಿಸಲು ಸೂಚಿಸಿದೆ ಎಂದೂ ಹೇಳಲಾಗಿದೆ.
ಯಡಿಯೂರಪ್ಪ ಅವರು ಹೊಸದಾಗಿ ಮತ್ತೊಂದು ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರ-ವಹಿವಾಟು ನಿಷೇಧಿಸಿದೆ. ಹೊಸ ಮಾರ್ಗಸೂಚಿ ಜಾರಿಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪೊಲೀಸರು ರಸ್ತೆಬದಿ ಅಂಗಡಿ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ.
ಮೇ4ರವರೆಗೆ ರಾಜ್ಯದ ಎಲ್ಲಾ ಅಂಗಡಿಗಳನ್ನ ಮುಚ್ಚಲು ಆದೇಶಿಸಲಾಗಿದ್ದು, ದಿನಸಿ, ತರಕಾರಿ, ಹಾಲು, ಮೆಡಿಕಲ್ ಗಳಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
ದಿನಸಿ ಅಂಗಡಿ, ಹಾಲು ತರಕಾರಿ, ಹಣ್ಣುಗಳ ಅಂಗಡಿ, ಮನೆ ಕಟ್ಟುವ ಸಾಮಾಗ್ರಿ ಅಂಗಡಿ, ಎಲೆಕ್ಟ್ರಾನಿಕ್ ಶಾಪ್ ಗಳು, ಪಿವಿಸಿ ಪೈಪ್ ಗಳ ಅಂಗಡಿ, ಹೋಟೆಲ್, ಟೀ ಕಾರ್ನರ್ ಗಳು ಪಾರ್ಸಲ್ ಮಾತ್ರ, ಎಂಎಸ್ ಐಎಲ್, ಔಟ್ ಲೆಟ್ ಪಾರ್ಸಲ್ಗೆ ಅವಕಾಶವಿದೆ ಎಂದು ಹೇಳಲಾಗಿದೆ.
ಚಪ್ಪಲಿ, ಬಟ್ಟೆ, ಟೈರ್ ಮಾರಾಟ, ಶೂ, ಟಿವಿ ಶೋರೂಂಗಳು, ಗಡಿಯಾರದ ಅಂಗಡಿ, ಕನ್ನಡಕದ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಸೂಚಿಷಿದ್ದಾರೆ.