ಡ್ರಗ್ಸ್ ಮಾಫಿಯಾ: ನಿರೂಪಕ ಅಕುಲ್ ಬಾಲಾಜಿ, ಮಾಜಿ ಶಾಸಕರ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸಿನಿಮಾ ನಟ-ನಟಿಯರು ಮಾತ್ರವಲ್ಲದೇ ಅನೇಕ ರಾಜಕಾರಣಿಗಳ ಸಂಬಂಧಿಗಳು ಜಾಲದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು ಇಂದು ಮತ್ತೆ ಮೂವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.
ಮಾಜಿ ಶಾಸಕ ಆರ್ ವಿ .ದೇವರಾಜ್ ಅವರ ಪುತ್ರ ಯುವರಾಜ್, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಂತೋಷ್ ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿ ಅವರಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ರವಾನಿಸಿದ್ದಾರೆ. ಈ ಮೂವರು ನಾಳೆ ವಿಚಾರಣೆ ಹಾಜರಾಗುವಂತೆ ತಿಳಿಸಲಾಗಿದೆ.
ಕಾಟನ್ ಪೇಟೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನ ಮೂವರಿಗೆ ನೋಟಿಸ್ ನೀಡಿದೆ.
ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ಅಕುಲ್ ಬಾಲಾಜಿ “ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನಲ್ಲಿ ತಿಳಿಸಿದೆ.ನಾನು ಹೈದರಾಬಾದ್ ನಲ್ಲಿದ್ದೇನೆ. ನನಗೆ ಸಿಸಿಬಿ ನೋಟೀಸ್ ಸಿಕ್ಕಿದೆ. ನಾಳೆ ವಿಚಾರಣೆಗೆ ಕರೆಯಲಾಗಿದ್ದು ಫ್ಲೈಟ್ ಅಥವಾ ಡ್ರೈವ್ ಮೂಲಕ ಬೆಂಗಳೂರಿಗೆ ತಲುಪಿ ವಿಚಾರಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ.
ಇನ್ನೊಂದೆಡೆ ನಟ ಸಂತೋಷ್ ಕುಮಾರ್ ಸಹ ಮಾತನಾಡಿ “ನಾನು ಸಂಬಂಧಿಕರ ಮನೆ ಕಾರ್ಯಕ್ರಮದ ನಿಮಿತ್ತ ಮೈಸೂರಿನಲ್ಲಿದ್ದು ನಾಳೆ ವಿಚಾರಣೆಗೆ ಹಾಜರಾಗುತ್ತೇನೆ.” ಎಂದಿದ್ದಾರೆ.