ಬಾಳೆ ಬೆಳೆಗಿಲ್ಲ ಸೂಕ್ತ ಬೆಲೆ: ತೋಟದಲ್ಲೇ ಬೆಳೆ ನಾಶಮಾಡಿ ರೈತರ ಆಕ್ರೋಶ!
ಬೆಳೆದ ಬಾಳೆ ಹಣ್ಣು ಬೆಳೆ ಗೆ ಸರಿಯಾದ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತರೊಬ್ಬರು ತಮ್ಮ ತೋಟದ ಬಾಳೆ ಗಿಡಗಳನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಂಗಪ್ಪ ಹಳ್ಳೋಳ್ಳಿ ಎಂಬ ಯುವ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆಯನ್ನು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಒಂದು ಟನ್ ಬಾಳೆ ಹಣ್ಣಿಗೆ 3,000 ದಿಂದ 4,000 ರೂಗಳಷ್ಟು ಬೆಲೆ ಸಿಗುತ್ತಿದ್ದು, ಮಾರುಕಟ್ಟೆಯ ಸಾಗಾಟ ವ್ಯಚ್ಚಕ್ಕೂ ಆ ಬೆಲೆ ಸಾಕಾಗುವುದಿಲ್ಲ ಎಂದು ಬೇಸರಗೊಂಡಿರುವ ಗಂಗಪ್ಪ ತೋಟದಲ್ಲಿಯೇ ತಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ.
ಕಾಗವಾಡ ಮತ್ತು ಚಿಕ್ಕೋಡಿ ಭಾಗದಲ್ಲಿ ಬಾಳೆ ಬೆಳೆಗೆ ಸರಿಯಾದ ಮಾರುಕಟ್ಟೆಯಿಲ್ಲ. ಹಾಗಾಗಿ ಬೆಳಗಾವಿ ಅಥವಾ ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಬಾಳೆ ಹಣ್ಣನ್ನು ಸಾಗಿಸಬೇಕು. ಅಲ್ಲಿಯ ಮಾರುಕಟ್ಟೆಗಳಿಗೆ ಬೆಳೆಯನ್ನು ಸಾಗಿಸಲು 8 ರಿಂದ 10 ಸಾವಿರ ಹಣ ಖರ್ಚಾಗುತ್ತದೆ. ಅದರೆ, ಮಾರುಕಟ್ಟೆಯಲ್ಲಿ 3,000 ಸಿಗುತ್ತದೆ. ಹೀಗಿರುವಾಗ ಬೆಳೆಯನ್ನು ಹೇಗೆ ಸಾಗಿಸುವುದು ಎಂದು ರೈತ ಗಂಗಪ್ಪ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ಟನ್ ಬಾಳೆ ಹಣ್ಣಿಗೆ 12 ರಿಂದ 15 ಸಾವಿರ ಬೆಲೆ ಇತ್ತು. ಆದರೆ, ಈಗ ಬೆಲೆ ಸಂಪೂರ್ಣ ಕುಸಿದೆ. ಬಾಳೆ ಬೆಳೆ ಬೆಳೆಯಲು ಸಾಲ ಮಾಡಿದ್ದೇವೆ. ಸಾಲ ತೀರಿಸಲೂ ಬೇಕಾದಷ್ಟು ಬೆಲೆಯೂ ಬಾಳೆ ಹಣ್ಣಿಗೆ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ
ಸರ್ಕಾರ ರೈತರನ್ನು ದೇಶದ ಬೆನ್ನೆಲೆಬು ಎಂದು ಕರೆಯುತ್ತದೆ. ಆದರೆ, ಸರ್ಕಾರದ ನೀತಿಗಳೆಲ್ಲವೂ ಬಂಡವಾಳಶಾಹಿಗಳ ಪರವಾಗಿವೆ. ರೈತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಸರ್ಕಾರಗಳು ರೈತರ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಸಾಲ ಮಾಡಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ಬಾಳೆ ಬೆಳೆ ಬೆಳದು ನಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಬಾಳೆ ಮಾರುಕಟ್ಟೆಯನ್ನು ಸಮೀಪದಲ್ಲೇ ಆರಂಭಿಸಬೇಕು ಎಂದು ಸ್ಥಳೀಯ ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತರು ಬಾಳೆ ಹಣ್ಣು ಬೆಳೆಯದು ಖರ್ಚು ಮಾಡಿದ ಬಂಡವಾಳವೂ ಹಿಂದಿರುಗಿ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ರೈತರಿಂದ ಬೆಳೆಗಳನ್ನು ಕೊಂಡು ಮಾರಾಟ ಮಾಡುವವರು ಒಳ್ಳೆಯ ಲಾಭ ಪಡೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಒಂದು ಟನ್ ಬಾಳೆಗೆ 3,000 ಸಾವಿರ ವಿದ್ದರೆ, ಬೆಂಗಳೂರಿನಲ್ಲಿ ಒಂದು ಕೆಜಿ ಬಾಳೆ ಹಣ್ಣಿಗೆ 40 ರೂ ಇದೆ. ಅಂದರೆ, ಒಂದು ಟನ್ಗೆ 40,000 ರೂ ಇದೆ.
ಇದನ್ನೂ ಓದಿ: ಎಪಿಎಂಸಿ ಮಸೂದೆ: ಕಾರ್ಪೋರೇಟ್ ಕುಣಿಕೆಗೆ ರೈತರ ಕೊರಳು