ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ ಎಂದು ರೈತಸಂಘದ ರಾಜ್ಯಾದ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ನಾನಾ ಸುಗ್ರೀವಾಜ್ಞೆಗಳನ್ನು ಹಿಂಪಡೆಬೇಕು ಎಂದು ಆಗ್ರಹಿಸಿ ರಾಜ್ಯದ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಐಕ್ಯ ಹೋರಾಟವನ್ನು ನಡೆಸುತ್ತಿವೆ.

ಪ್ರತಿಭಟನಾ ರ್ಯಾಲಿಯ ಆರಂಭದಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ ಅವರು, ಇಂದು ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರು ಬೆಂಗಳೂರು ರೈಲು ನಿಲ್ದಾಣದಿಂದ ಹೊರಟು ಫ್ರೀಡಂ ಪಾರ್ಕ್‌ವರೆಗೆ ದೊಡ್ಡಮಟ್ಟದ ರ್‍ಯಾಲಿ ನಡೆಸಿ, ನಂತರ ಅಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .

“ಸರ್ಕಾರ ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಅವುಗಳನ್ನು ರೈತವಿರೋಧಿ ಕಾಯ್ದೆಗಳನ್ನಾಗಿ ಮಾಡಲು ಹೊರಟಿದೆ. ಇದರ ಮೂಲಕ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಟ್ಟು, ರೈತರನ್ನು ಅವರ ಗುಲಾಮರಾಗುವಂತೆ ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಈ ಕಾಯ್ದೆಗಳಿಗೆ ತಿದ್ದುಪಡಿ ತರುವ ಅಗತ್ಯವೇನಿತ್ತು. ಭೂ ಒಡೆತನ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮುಂತಾದ ಕಾಯ್ದೆಗಳ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಾಡಿನ ರೈತ, ದಲಿತ ಮತ್ತು ಕಾರ್ಮಿಕ ಸಮುದಾಯವನ್ನು ಎದುರು ಹಾಕಿಕೊಂಡಿದೆ. ಈಗ ತಿದ್ದುಪಡಿ ಕಾಯ್ದೆಗಳನ್ನು ಈ ಕೂಡಲೇ ವಾಪಸ್ಸು ಪಡೆಯದಿದ್ದರೇ, ಯಡಿಯೂರಪ್ಪನವರ ಕುರ್ಚಿಯನ್ನು ಅವರು ಹೇಗೆ ಉಳಿಸಿಕೊಳ್ಳುತ್ತಾರೆ ನೋಡೋಣ. ರಾಜ್ಯದ ರೈತರು ದಲಿತರು ಕಾರ್ಮಿಕರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಅಧಿವೇಶನದಲ್ಲಿ ರೈತಪರವಾದ ನಿಲುವಿಗೆ ಬರದಿದ್ದರೆ ಖಂಡಿತವಾಗಿಯೂ ನಾವು ಅವರನ್ನು ಕುರ್ಚಿಯಿಂದ ಇಳಿಸುತ್ತೇವೆ” ಎಂದು ಹೇಳಿದರು.

ಇಂದಿನಿಂದ ಕರ್ನಾಟಕ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಇಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ತಂದಿರುವ ಕೆಲವು ಮಸೂದೆಗಳಿಗೆ ಅಧಿಕೃತವಾಗಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಇದರಲ್ಲಿ ಕೃಷಿ ಸಂಬಂಧಿತ ಮಸೂದೆಗಳೂ ಸೇರಿದ್ದು, ಅವುಗಳು ರೈತವಿರೋಧಿಯಾಗಿವೆ ಎಂದು ರಾಜ್ಯದಾದ್ಯಂತ ಇರುವ ರೈತ, ದಲಿತ, ಕಾರ್ಮಿಕ ಮತ್ತು ಇತರ ಸಂಘಟನೆಗಳು ಒಟ್ಟಾಗಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಈ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಜನತಾಧಿವೇಶನ ನಡೆಸಿ, ಚರ್ಚೆ ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರಾಜ್ಯದ 39 ಸಂಘಟನೆಗಳ ಹೋರಾಟಗಾರರು ಸೇರಿದಂತೆ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್, ಹೋರಾಟಗಾರರು ಮತ್ತು ಸಾಹಿತಿಗಳಾದ ದೇವನೂರು ಮಹಾದೇವ, ವಿಶ್ರಾಂತ ನ್ಯಾ. ಎಚ್.ಎನ್.ನಾಗಮೋಹನದಾಸ್, ಅಖಿಲಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಡಾ.ಅಶೋಕ್ ದಾವಲೆ, ನೂರ್ ಶ್ರೀಧರ್, ಎಸ್.ಆರ್.ಹಿರೇಮಠ್, ಶಿವಕುಮಾರ್ ಕಕ್ಕಾಚಿ, ಮೈಕೆಲ್ ಬಿ.ಫರ್ನಾಂಡೀಸ್ ಸೇರಿಂದಂತೆ ಹಲವಾರು ಚಿಂತಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.


ಇದನ್ನೂ ಓದಿ: ಜಮೀನ್ದಾರಿ ಪದ್ದತಿಯನ್ನು ಮರುಕಳಿಸುತ್ತಿದೆ ಭೂಸುಧಾರಣಾ ತಿದ್ದುಪಡಿ ಕಾಯ್ದೆ: ಮೋದಿಗೆ ಸಿದ್ದರಾಮಯ್ಯ ಪತ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights