ಸುಳ್ಳಾಯಿತು ಸರ್ಕಾರದ ಸೀರೆ ಬ್ಯಾಂಕ್ ಭರವಸೆ! ಲಾಕ್ಡೌನ್ ನಂತರ ರಾಜ್ಯದಲ್ಲಿ 16 ನೇಕಾರರು ಆತ್ಮಹತ್ಯೆ!
ನೋಟ್ ಬ್ಯಾನ್, ಜಿಎಸ್ಟಿ ಇಂದಾಗಿ ಕಂಗಾಲಾಗಿದ್ದ ನೇಕಾರಿಕೆ ಉದ್ಯಮ, ಲಾಕ್ಡೌನ್ನಿಂದಾಗಿ ಮತ್ತಷ್ಟು ಹೊಡೆತ ತಿಂದಿದೆ. ಉದ್ಯಮ ನಂಬಿದ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ನೇಕಾರಿಕೆ ಉದ್ಯಮಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರದ ಮಾತು ಭರವಸೆಯಾಗಿಯೇ ಉಳಿದ್ದು, ನೇಕಾರರು ಅಕ್ಷಶಃ ಜೀವನ ನಡೆಸುವುದು ಸವಾಲಾಗಿದೆ.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನೇಕಾರರು ಬೆಳಗಾವಿ ಜಿಲ್ಲೆಯಲ್ಲಿದ್ದು, 1.20 ಲಕ್ಷ ಕುಟುಂಬಗಳು 26 ಸಾವಿರ ಮಗ್ಗಗಳನ್ನು ಹೊಂದಿದ್ದು, ನೇಕಾರಿಕೆ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ ನಿಂದಾಗಿ ಉದ್ಯಮ ವ್ಯಾಪಾರ ಕುಸಿದಿದ್ದು, ನೇಕಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಉದ್ಯಮದಲ್ಲಿನ ಸಂಕಷ್ಟ, ಸಾಲಭಾದೆಯಿಂದ ಬೇಸತ್ತು ರಾಜ್ಯದಲ್ಲಿ 16 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ತೆರವುಗೊಳಿಸಿದ ನಂತರ ರಾಜ್ಯ ಸರ್ಕಾರ ಉದ್ಯಮದ ಚೇತರಿಕೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ರಾಜ್ಯದಲ್ಲಿ ನೇಕಾರರ ಬಳಿ ಉಳಿದಿರೋ 15 ಲಕ್ಷ ಸೀರೆಗಳ ಖರಿದೀಗೆ 60 ಕೋಟಿ ರೂಪಾಯಿ ನೀಡುವ ಭರವಸೆ ನೀಡಿತ್ತು. ನಂತರ ಇದು ಬದಲಾಗಿ 6 ಲಕ್ಷ ಸೀರೆಗಳ ಖರೀದಿಗೆ 38 ಕೋಟಿ ರೂಪಾಯಿ ನೀಡೋ ಆಶ್ವಾಸನೆಯನ್ನು ಸರ್ಕಾರ ನೀಡಿತ್ತು. ಆದರೆ, ಈಗಾಗಲೇ ಮೂರ್ನಾಲ್ಕು ತಿಂಗಳುಗಳು ಕಳೆದಿದ್ದರೂ, ನೇಕಾರರಿಗೆ ಯಾವುದೇ ನೆರವು ದೊರೆತಿಲ್ಲ.
ಅಲ್ಲದೆ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ 2 ಲಕ್ಷ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈವರೆಗೆ ಯಾವುದೇ ಪರಿಹಾರದ ಹಣ ನೀಡಿಲ್ಲ. ಇದೇ ರೀತಿಯ ಸರ್ಕಾರ ತನ್ನ ನಡುವಳಿಕೆಯನ್ನು ಮುಂದುವರೆಸಿದರೆ ಅನಿವಾರ್ಯವಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ನೇಕಾರರ ಮುಖಂಡ ಪರುಶುರಾಮ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .