ಮಾಧ್ಯಮಗಳ ವಿರುದ್ಧ ಸಿಡಿದ ಬಾಲಿವುಡ್‌: ಸುದ್ದಿ ಚಾನೆಲ್‌ಗಳ ಮೇಲೆ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು!

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಬಾಲಿವುಡ್‌ ಚಿತ್ರರಂಗದ ವಿರುದ್ಧ ಮಾಡಿದ ಅವಹೇಳನ ಮತ್ತು ಬೇಜವಾಬ್ದಾರಿಯುತ ವರದಿಗಳ ವಿರುದ್ಧ ಬಾಲಿವುಡ್ ಸ್ಟಾರ್‌ಗಳು ದೆಹಲಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್‌ ನೌ- ಎರಡು ಚಾನೆಲ್‌ಗಳ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ರಾಹುಲ್ ಶಿವಶಂಕರ್ ಮತ್ತು ನವಿಕಾ ಕುಮಾರ್ ವಿರುದ್ಧ ಬಾಲಿವುಡ್ ಸ್ಟಾರ್‌ಗಳಾದ ಅಮೀರ್‌ ಖಾನ್, ಶಾರುಖ್‌ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ  4 ಚಲನಚಿತ್ರೋದ್ಯಮ ಸಂಘಗಳು ಮತ್ತು 34 ನಿರ್ಮಾಪಕರು ಇದರಲ್ಲಿ ದೂರುದಾರರಾಗಿದ್ದಾರೆ.

“ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಬಾಲಿವುಡ್ ಮತ್ತು ಅದರ ಸದಸ್ಯರ ವಿರುದ್ಧ ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿಕರವಾದ ಹೇಳಿಕೆ ನೀಡುವುದನ್ನು ತಡೆಯಬೇಕು” ಎಂದು ದೂರಿನಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಸುಳ್ಳನ್ನೇ ಭಿತ್ತರಿಸಿ ಭಯೋತ್ಪಾದನೆಯ ಪಟ್ಟ ಕಟ್ಟುವುದೇ ಮಾಧ್ಯಮದ ಕೆಲಸ: ಉಮರ್ ಖಾಲಿದ್

ಚಾನೆಲ್‌ಗಳು 1994 ರ ಪ್ರೋಗ್ರಾಂ ಕೋಡ್‌ಗೆ ಬದ್ಧವಾಗಿರಬೇಕು ಮತ್ತು ಬಾಲಿವುಡ್ ವಿರುದ್ಧ ಪ್ರಕಟಿಸಿದ ಎಲ್ಲಾ ಮಾನಹಾನಿಕರ ವಿಷಯವನ್ನು ಹಿಂತೆಗೆದುಕೊಳ್ಳಿ ಅಥವಾ ತೆಗೆದುಹಾಕಿ” ಎಂದು ಚಲನಚಿತ್ರ ನಿರ್ಮಾಪಕರು ಒತ್ತಾಯಿಸಿದ್ದಾರೆ.

ಈ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಇದೇ ಮೊದಲಲ್ಲ. ಮಾನಹಾನಿಕರ, ಆಧಾರರಹಿತ ಮತ್ತು ತಪ್ಪಾದ ಸುದ್ದಿಗಳನ್ನು ಪ್ರಸಾರ ಮಾಡಿದ ತಪ್ಪಿತಸ್ಥರೆಂದು ಕಂಡುಬಂದಿದ್ದು, ಮೊದಲಿನಿಂದಲೂ ಅವರನ್ನು ಖಂಡಿಸಲಾಗಿದ್ದು, ದಂಡವನ್ನೂ ವಿಧಿಸಲಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

“ಬಾಲಿವುಡ್ ಎನ್ನುವುದು ಲಕ್ಷಾಂತರ ಜನರಿಗೆ ಬದುಕು ಕಲ್ಪಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಲಾಭವುಂಟಾಗಿದೆ. ಯಾವುದೋ ಒಂದು ಪ್ರಕರಣವನ್ನಿಟ್ಟುಕೊಂಡು ಇಡೀ ಉದ್ಯಮವನ್ನು ದೂರುವುದು ಸರಿಯಲ್ಲ. ಮಾಧ್ಯಮ ಸಂಸ್ಥೆಗಳು ಬಳಸುತ್ತಿದ್ದ ಅಸಂವಿಧಾನಿಕ ಪದಗಳಂತೂ ಖಂಡನೀಯ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಂಗನಾ, ಮಹಾ ಸರ್ಕಾರದ ಕಿತ್ತಾಟದಲ್ಲಿ ಮರ್ಯಾದೆ ಕಳೆದುಕೊಂಡ ಮಾಧ್ಯಮಗಳು!

ಸುಶಾಂತ್ ಸಿಂಗ್ ಅಸಹಜ ಸಾವಿನ ಆರಂಭದಿಂದ ಇಲ್ಲಿಯವರೆಗೂ ಮಾಧ್ಯಮಗಳನ್ನು ನಿಯಂತ್ರಿಸಲು ನ್ಯಾಯಾಲಯ ಮತ್ತು ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದಾಗ್ಯೂ ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಸುಶಾಂತ್ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳುವುದಕ್ಕೂ ಮೊದಲು ಮತ್ತು ನಂತರ ತಮ್ಮದೇ ಆದ ಊಹಾಪೂಹದ ತನಿಖಾ ವರದಿಗಳನ್ನು ಈ ಸುದ್ಧಿ ಸಂಸ್ಥೆಗಳು ಪ್ರಸಾರ ಮಾಡುತ್ತಿದ್ದವು. ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಮುಖಂಡರು ಸೇರಿದಂತೆ ಅರ್ನಾಬ್ ಗೋಸ್ವಾಮಿ ಮೇಲೆ ಪ್ರಕರಣ ದಾಖಲಿಸಿದ್ದರು. ಸಿಬಿಐ ಕೂಡ ಮಾಧ್ಯಮಗಳನ್ನು ನಿಯಂತ್ರಿಸಬೇಕು ಎಂದು ಹೇಳಿಕೆ ನೀಡಿ, ನಾವು ತನಿಖೆಯ ಯಾವುದೇ ಅಂಶಗಳನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿಲ್ಲ. ಮಾಧ್ಯಮಗಳಲ್ಲಿ ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿತ್ತು.

ಸುಶಾಂತ್ ಸಿಂಗ್ ಸಾವನ್ನು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಈ ಮಾಧ್ಯಮ ಸಂಸ್ಥೆಗಳು ಕೂಗಾಡುತ್ತಿದ್ದವು. ಆದರೆ ವೈದ್ಯಕೀಯ ಸಂಸ್ಥೆ ಏಮ್ಸ್ ನೀಡಿದ ಆತ್ಮಹತ್ಯೆ ವರದಿಯ ನಂತರ ಈಗ ಸುಮ್ಮನಾಗಿವೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ರಿಪಬ್ಲಿಕ್ ಟಿವಿಯ ಟಿಆರ್‌ಪಿ ಹಗರಣ ಬಯಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆಯೂ ವಿಚಾರಣೆಯನ್ನು ಎದುರಿಸುತ್ತಿದೆ. ಬಜಾಜ್ ಮತ್ತು ಪಾರ್ಲೆಜಿ ಕಂಪನಿಗಳು ಈ ರೀತಿಯ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿವೆ.


ಇದನ್ನೂ ಓದಿ: ಮೋದಿ ಸರ್ಕಾರ ದೇಶವನ್ನು ಪಾತಾಳಕ್ಕೆ ದೂಡಿದೆ; ಮಾಧ್ಯಮಗಳು ಅದ್ಭುತ ಎನ್ನುತ್ತಿವೆ: ರಾಹುಲ್‌ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights