ಬಿಜೆಪಿಗರ ವಿರೋಧದ ನಡುವೆಯೂ ಮಹಿಷ ದಸರಾ ಯಶಸ್ವಿ ಆಚರಣೆ!
ಮಹಿಷಪುರವೆಂದು ಕರೆಯಲ್ಪಡುತ್ತಿದ್ದ ಮೈಸೂರಿನಲ್ಲಿ ಇಂದು ಮಹಿಷ ದಸರಾ ಅಚರಣೆ ನಡೆದಿದೆ. ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸರಳವಾಗಿ ಮಹಿಷ ದಸರಾ ಆಚರಣೆ ಮಾಡಲಾಗಿದೆ.
2016ರಿಂದ ಪ್ರತಿ ವರ್ಷವೂ ನಡೆಯುತ್ತಿರುವ ಮಹಿಷ ದಸರಾ ಆಚರಣೆ ಹಲವಾರು ವಿರೋಧಗಳ ನಡುವೆಯೂ ಮಹಿಷಾ ದಸರಾ ಆಚರಣೆ ಸಮಿತಿ ವತಿಯಿಂದ ಇಂದು ನಡೆದಿದೆ.
ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿಗರ ವಿರೋಧಗಳ ನಡುವೆ ವೇದಿಕೆ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡದ ಪೊಲೀಸರು, ಸರಳ ಮಹಿಷ ದಸರಾ ಆಚರಣೆ ಅವಕಾಶ ಕೊಟ್ಟಿದ್ದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಮಹಿಷಾ ದಸರಾ ಆಚರಣೆ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಪುರುಷೋತ್ತಮ್, ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದರಾಮು ಸ್ವಾಮೀಜಿ ಹಾಗೂ ಪ್ರೊ. ಮಹೇಶ್ ಚಂದ್ರಗುರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಳೆದ ವರ್ಷ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆ ಬಳಿ ವಿಜೃಂಭಣೆಯ ಮಹಿಷ ದಸರಾ ಆಯೋಜಿಸಲಾಗಿತ್ತು. ಆದರೆ, ಸಂಸದ ಪ್ರತಾಪ್ ಸಿಂಹರ ಒತ್ತಡಕ್ಕೆ ಮಣಿದ ಮೈಸೂರು ಪೊಲೀಸರು ಚಾಮುಂಡಿ ಬೆಟ್ಟದಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ವೇದಿಕೆ ಕಾರ್ಯಕ್ರಮವನ್ನು ತಡೆದು, ವೇದಿಕೆಯನ್ನು ತೆರವುಗೊಳಿಸಿದ್ದರು.
ಮಹಿಷ ದಸರಾ ಕುರಿತು ಈ ಹಿಂದೆ ಸುದ್ದಿಗೋಷ್ಟಿ ನಡೆಸಿದ್ದ, ಮಹಿಷಾ ದಸರಾ ಆಚರಣೆ ಸಮಿತಿ, ಅಕ್ಟೊಬರ್ 15ರಂದು ಈ ಬಾರಿಯೂ ಮಹಿಶ ದಸರಾ ಮಾಡೇ ಮಾಡ್ತೇವೆ. ತಾಕತ್ತಿದ್ದರೆ ತಡೆಯಲಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಅವರಿಗೆ ಸವಾಲು ಹಾಕಿದ್ದರು.
ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!
“ಮೈಸೂರಿನಲ್ಲಿ ದಸರಾಗಿಂತ ಮುಖ್ಯವಾಗಿ ಆಚರಣೆ ಮಾಡಬೇಕಾಗಿರುವುದು ಮಹಿಷಾ ದಸರಾವನ್ನು. ಇದನ್ನು ವಿರೋಧಿಸುವವರು ಕಂತ್ರಿಗಳು, ಸಂವಿಧಾನ ವಿರೋಧಿಗಳು, ಮೂಲ ನಿವಾಸಿಗಳ ವಿರೋಧಿಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿಗಳು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಾವು ಎಲ್ಲರೂ ಮರೆತಿರುವ ಚರಿತ್ರೆಯನ್ನು ನೆನಪಿಸಿಕೊಳ್ಳವ ಉದ್ದೇಶದಿಂದ ಮಹಿಷ ದಸರಾ ಆಚರಿಸುತ್ತಿದ್ದೇವೆ. ನಾವು ದೇಶದ ಮೂಲ ನಿವಾಸಿಗಳು. ಇಂದು ನಮ್ಮನ್ನು ಆಳುತ್ತಿರುವವರು ಮೂಲ ನಿವಾಸಿಗಳ ವಿರೋಧಿಗಳು. ಸರ್ಕಾರ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೈ ಮುಗಿದು ಬೇಡುವುದಿಲ್ಲ, ಆದರೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದ್ದಾರೆ.
“ಮಹಿಷಾ ಸಾಮಾಜಿಕವಾಗಿ ಸಮಾನತೆಗೋಸ್ಕರ ಹೋರಾಟ ಮಾಡಿದ ವ್ಯಕ್ತಿಯಾಗಿದ್ದಾನೆ. ಆದ್ದರಿಂದಲೇ ಮೈಸೂರಿಗೆ ಮಹಿಷಾ ಮಂಡಲ, ಮಹಿಷಾಪುರ ಮುಂತಾದ ಹೆಸರು ಬಂದಿದೆ. ಮನುವಾದಿಗಳು ಸಾಮಾಜಿಕ ಸಮಾನತೆಗೆ ಹೋರಾಟ ಮಾಡಿದವರನ್ನು ರಾಕ್ಷಸರು ಎಂದು ಕರೆಯುತ್ತಾರೆ. ಇವತ್ತಿಗೂ ತಮಿಳುನಾಡಿನಿಂದ ಪ್ರತಿವರ್ಷ ಒಂದು ಗುಂಪು ಬಂದು ಮಹಿಷಾನಿಗೆ ಪೂಜೆ ಮಾಡಿ ಊಟ ಮಾಡಿಕೊಂಡು ಹೋಗುತ್ತಾರೆ, ಇವೆಲ್ಲವು ಗೊತ್ತಿರುವಂತಹ ವಿಚಾರ. ಪ್ರತಿ ವರ್ಷದಂತೆ ನಾವು ಈ ಬಾರಿಯು ಅಕ್ಟೋಬರ್ 15 ರಂದು ಮಹಿಷಾ ದಸರಾ ಆಚರಿಸುತ್ತೇವೆ” ಎಂದು ಶಾಂತರಾಜು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಗೆ ತಾಕತ್ತಿದ್ದರೆ ಭಾರತದಲ್ಲಿ ಬುದ್ದನ ದೇವಸ್ಥಾನ ಕಟ್ಟಲಿ – ಪ್ರೋ.ಕೆ.ಎಸ್.ಭಗವಾನ್