ಗೌರಿ ಲಂಕೇಶರಂತೆ ನನ್ನನ್ನೂ ಕೊಲ್ಲಬಹುದು ಎನ್ನಿಸಿತ್ತು: ವಕೀಲೆ ದೀಪಿಕಾ ಸಿಂಗ್‌ ರಜಾವತ್

ಜಮ್ಮು ಕಾಶ್ಮೀರದ ವಕೀಲೆ ದೀಪಿಕಾ ಸಿಂಗ್‌ ರಜಾವತ್‌ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ ವ್ಯಂಗ್ಯ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆ ವ್ಯಂಗ್ಯಚಿತ್ರವನ್ನು ವಿರೋಧಿಸಿ ಹಿಂದೂತ್ವವಾದಿ ಪುಂಡರ ಗುಂಪು ಜಮ್ಮುವಿನ ಅವರ ಮನೆ ಮುಂದೆ ಜಾಮಾಯಿಸಿ ಅವರಿಗೆ ಘೋಷಣೆ ಕೂಗುತ್ತಾ, ಕೊಲೆ ಬೆದರಿಕೆ ಹೊಡ್ಡಿದ್ದಾರೆ. ಆ ಗುಂಪು ತಮ್ಮ ಮನೆ ಮುಂದೆ ಗೂಂಡಾಗಿರಿ ನಡೆಸುತ್ತಿದ್ದ ಸಮಯದಲ್ಲಿ ತನಗೆ ಸಂಘಿಗಳ ಕೋಮುವಾದಿ ಧೋರಣೆಗಳನ್ನು ಟೀಕಿಸಿದ್ದಕ್ಕಾಗಿ ಸಂಘಪರಿವಾರದ ಗುಂಡಿಗೆ ಬಲಿಯಾದ ಗೌರಿ ಲಂಕೇಶರು ನೆನಪಾದರು. ಗೌರಿ ಲಂಕೇಶರಂತೆ ನನ್ನನ್ನೂ ಕೊಲ್ಲಬಹುದು ಎನ್ನಿಸಿತ್ತು ಎಂದು ದೀಪಿಕಾ ಸಿಂಗ್‌ ರಜಾವತ್ ಹೇಳಿದ್ದಾರೆ.

“ಪುಂಡರ ಗುಂಪೊಂದು ನನ್ನ ನಿವಾಸದ ಹೊರಗೆ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿತು. ದೀಪಿಕಾ ನಿಮ್ಮ ಸಮಾಧಿಯನ್ನು ಜಮ್ಮು ಮತ್ತು ಕಾಶ್ಮೀರದ ಭೂಮಿಯಲ್ಲಿ ಮಾಡುತ್ತೇವೆ” ಎಂದು ಕೂಗುತ್ತಿದ್ದರು ಎಂದು ದೀಪಿಕಾ ಸಿಂಗ್ ಹೇಳಿರುವುದಾಗಿ ನ್ಯೂಸ್‌ಕ್ಲಿಕ್‌ ವರದಿ ಮಾಡಿದೆ.

ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

“ಕೆಲವರು ನನ್ನ ಹೆಸರನ್ನು ಕೂಗಿ ದಾಂದಲೆ ನಡೆಸುತ್ತಿದ್ದಾಗ ರಾತ್ರಿ 12.30 ಆಗಿತ್ತು. ನಾನು ಸಾವಿಗೆ ಹೆದರುತ್ತಿದ್ದೆ. ನಾನು ನನ್ನ ಪಿಎಸ್‌ಒಗಳನ್ನು ಎಚ್ಚರಿಸಿದೆ. ತಕ್ಷಣ ಪ್ರತಿಕ್ರಿಯಿಸಿದ ಐಜಿಗೆ ಫೋನ್ ಮಾಡಿದೆ. ಆಗ ಕೆಲವು ಪೊಲೀಸರು ಬಂದು ಗುಂಪನ್ನು ಚದುರಿಸಿದರು” ಎಂದು ಅವರು ವಿವರಿಸಿದರು.

“ವ್ಯಂಗ್ಯ” ಎಂಬ ಶೀರ್ಷಿಕೆಯೊಂದಿಗೆ ದೀಪಿಕಾ ಸಿಂಗ್ ಪೋಸ್ಟ್ ಮಾಡಿದ ವ್ಯಂಗ್ಯ ಚಿತ್ರವು ಎರಡು ವಿರೋಧಾಭಾಸದ ದೃಶ್ಯಗಳನ್ನು ಸಾರಾಸಗಟಾಗಿ ತೋರಿಸಿದೆ. ಒಂದು ಚಿತ್ರದಲ್ಲಿ, ನವರಾತ್ರಿಯ ಒಂಬತ್ತು ದಿನಗಳ ಹಿಂದೂ ಹಬ್ಬದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸ್ತ್ರೀ ಹಿಂದೂ ದೇವತೆಯ ಪಾದಗಳನ್ನು ಸ್ಪರ್ಶಿಸಿ ನಮಿಸುತ್ತಾನೆ. ಪಕ್ಕದ ಚಿತ್ರದಲ್ಲಿ, “ಇತರೆ ದಿನಗಳು” ಎಂಬ ಶೀರ್ಷಿಕೆಯೊಂದಿಗೆ, ಅದೇ ಪುರುಷನು ಮಹಿಳೆಯ ಎರಡೂ ಕಾಲುಗಳನ್ನು ಆಕ್ರಮಣಕಾರಿಯಾಗಿ ಹಿಡಿದುಕೊಂಡಿರುತ್ತಾನೆ. ಇದು ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಧ್ವನಿಸುತ್ತದೆ.

ಈ ಕಾರ್ಟೂನ್ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ, ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ದೀಪಿಕಾ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅಂದಿನಿಂದ, ಅವರು ಮತ್ತು ಅವರ ಕುಟುಂಬವು ಕಾರ್ಟೂನ್ ತೆಗೆದುಹಾಕಿ ಮತ್ತು ಕ್ಷಮೆಯಾಚಿಸುವಂತೆ ಬೆದರಿಕೆ ಹಾಕುವ ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ.

ಇವುಗಳಿಗೆ ಪ್ರತಿಕ್ರಿಯಿಸಿದ ಅವರು “ಇಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲವೇ? ಭಾರತದಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಸಾಬೀತುಪಡಿಸಿದರೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ವ್ಯಂಗ್ಯಚಿತ್ರವನ್ನು ತೆಗೆದುಹಾಕಿಲ್ಲ. ಏಕೆಂದರೆ ಅದು ಧಾರ್ಮಿಕ ಭಾವನೆಗಳನ್ನು ನೋಯಿಸುವುದಿಲ್ಲ. ಆದರೆ ಮಹಿಳೆಯರ ಬಗ್ಗೆ ಸಮಾಜದ ಬೂಟಾಟಿಕೆಗಳನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ಅಥವಾ ವಿರೋಧಿಗಳ ಮೇಲೆ ಅಧಿಕಾರದ ಬಲ ಸ್ಥಾಪಿಸಲು ಅತ್ಯಾಚಾರದ ಸಿದ್ಧಾಂತ ಪ್ರತಿಪಾಸಿದ್ದ ಸಾವರ್ಕರ್

“ಈ ಜನಸಮೂಹ ಬಲಪಂಥೀಯ ಹಿಂದೂ ಗುಂಪುಗಳಿಗೆ ಸಂಬಂಧಿಸಿದವರು ಎಂದು ದೀಪಿಕಾ ಸಿಂಗ್ ಗುರುತಿಸಿದ್ದು, ಇದು ನನ್ನನ್ನು ಶಮನಗೊಳಿಸುವ ಪ್ರಯತ್ನವಾಗಿದ್ದು, ಆ ಸಮಯದಲ್ಲಿ, ನನಗೆ ಗೌರಿ ಲಂಕೇಶ್ ನೆನಪಾದರು. ಅವರ ಚಿತ್ರ ನನ್ನ ಮನಸ್ಸಿನಲ್ಲಿ ಸುಳಿಯುತ್ತಲೇ ಇತ್ತು. ನಾನು ನಡುಗುತ್ತಿದ್ದೆ. ಪತ್ರಕರ್ತೆ ಗೌರಿ ಲಂಕೇಶ್ ಅವರು ಬಲಪಂಥೀಯರನ್ನು ಟೀಕಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಸೆಪ್ಟೆಂಬರ್ 5, 2017 ರಂದು ಗುಂಡಿಕ್ಕಿ ಕೊಲ್ಲಲಾಯಿತು. ಮೋದಿ ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ನಾನು ಧ್ವನಿ ಎತ್ತಿದ್ದರಿಂದ ನನ್ನ ಮೇಲೆ ಇಂತಹ ಬೆದರಿಕೆಗಳು ಸಹಜವಾಗಿವೆ” ಎಂದು ಹೇಳಿದರು.

#IStandWithDeepikaRajawat ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿರುವ ಬಾಲಿವುಡ್ ನಟರು, ನಿರ್ದೇಶಕರು, ವಕೀಲರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ವಿಭಾಗಗಳಿಂದ ದೀಪಿಕಾ ಸಿಂಗ್ ಅವರಿಗೆ ಹೆಚ್ಚಿನ ಬೆಂಬಲ ಸೂಚಿಸಲಾಗಿದೆ.

ಈ ಹಿಂದೆಯೂ ಕೂಡ ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತರ ಪರವಾಗಿ ಹಾಜರಾಗಿದ್ದಕ್ಕೆ ಇದೇ ರೀತಿಯ ತೊಂದರೆಗಳನ್ನು ಇವರು ಅನುಭವಿಸಬೇಕಾಯಿತು.


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಗತ್ತಿನ ಮುಂದೆ ಸತ್ಯಬಿಚ್ಚಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights