ವಿಧಿ 370 ಮರು ಸ್ಥಾಪನೆ ಬಗ್ಗೆ ಸುಪ್ರೀಂಕೋರ್ಟ್ ಏನು ಹೇಳುತ್ತದೆಂದು ಈಗಲೇ ಊಹಿಸಬೇಡಿ: ಓಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 (ವಿಶೇಷ ಸ್ಥಾನಮಾನ)ವನ್ನು ಮತ್ತೆ ಮರಳಿ ಪಡೆಯುವುದಕ್ಕಾಗಿ ಜ&ಕಾ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಕ್ಕೂಟ ರಚಿಸಿಕೊಂಡು ಹೋರಾಟ ನಡೆಸುತ್ತಿವೆ. ಈ ನಡುವೆ ಸಂವಿಧಾನದ ವಿಧಿ 370ನ್ನು ಮತ್ತೆ ಸೇರಿಸುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಏನು ತೀರ್ಪು ಕೊಡುತ್ತಾರೆ ಎಂದು ನೀವು ಈಗಲೇ ತೀರ್ಮಾನಕ್ಕೆ ಬರಬೇಡಿ ಎಂದು ಹೇಳಿದ್ದಾರೆ.
ನೀವು ಯಾವುದನ್ನೂ ಮರು ಸ್ಥಾಪಿಸಬೇಕು ಎಂದು ನಾವು ಬಯಸುವುದಿಲ್ಲ, ಸುಪ್ರೀಂ ಕೋರ್ಟ್ ತನ್ನ ಸ್ವತಂತ್ರತೆಯನ್ನು ಬಲಿಕೊಟ್ಟು ಶರಣಾಗಿ ನೀವು ಹೇಳಿದಂತೆ ಕೇಳಬೇಕು ಎಂದು ನೀವು ಭಾವಿಸಿದ್ದೀರಿ. ಅದು ಈಗಲೇ ಸಾಧ್ಯವಿಲ್ಲ. ಅಲ್ಲಿಯವರೆಗೆ ನ್ಯಾಯಾಧೀಶರು ಏನು ತೀರ್ಪು ಕೊಡುತ್ತಾರೆ ಎಂದು ನೀವೇ ಊಹಿಸಿಕೊಳ್ಳಬೇಡಿ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
Dear Ravi Shankar Prasad ji, we don’t expect you to restore anything but unless you are suggesting the Supreme Court has surrendered its independence & takes dictation from you please don’t presume to know what the Hon judges will decide. https://t.co/s8rD3Us6JU
— Omar Abdullah (@OmarAbdullah) October 25, 2020
ನಿನ್ನೆ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಸಂವಿಧಾನ ವಿಧಿ 370ನ್ನು ಮರುಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು.
ಸಂವಿಧಾನ ವಿಧಿ 370ನ್ನು ಸೂಕ್ತ ಸಂವಿಧಾನ ಪ್ರಕ್ರಿಯೆ ಮೂಲಕ ತೆಗೆದುಹಾಕಲಾಗಿದ್ದು ಸಂಸತ್ತಿನ ಎರಡೂ ಸದನಗಳಲ್ಲಿ ಅಭೂತಪೂರ್ವ ಬೆಂಬಲದೊಂದಿಗೆ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ದೇಶದ ಕಡೆಗೆ ನಮ್ಮ ಬದ್ಧತೆಯನ್ನು ಅದು ತೋರಿಸುತ್ತಿದ್ದು ಜನರು ಅದನ್ನು ಬೆಂಬಲಿಸಿದ್ದಾರೆ ಎಂದರು.
ಸಂವಿಧಾನ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿ ಜಮ್ಮು-ಕಾಶ್ಮೀರದ ಹಲವು ಪಕ್ಷಗಳು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಆಗಸ್ಟ್ 5ರಂದು ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು.
ಇದನ್ನೂ ಓದಿ: ಪಾಕ್ ಸಿವಿಲ್ವಾರ್ ಸುದ್ದಿ: ಭಾರತೀಯ ಮಾಧ್ಯಮಗಳನ್ನು ಟ್ರೋಲ್ ಮಾಡಿದ ಪಾಕಿಸ್ತಾನೀಯರು!