ನಟ ದರ್ಶನ್ ಕರು ಅಲ್ಲ, ಡಿಕೆಶಿ ಹಸು ಅಲ್ಲ; ತಾಕತ್ತಿದ್ದರೆ ಕರೆಸಲಿ: ಆರ್ ಅಶೋಕ್
RRನಗರ ಚುನಾವಣಾ ಪ್ರಚಾರ ಇಂದು ಮುಗಿಯಲಿದೆ. ಈ ಮಧ್ಯೆ, ಮುನಿರತ್ನ ಪರವಾಗಿ ಪ್ರಚಾರ ಮಾಡಿದ್ದ ನಟ ದರ್ಶನ್ ಸುತ್ತ ರಾಜಕೀಯ ಚರ್ಚೆ ಆರಂಭವಾಗಿದೆ. ದರ್ಶನ್ ವಿಚಾರವಾಗಿ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ಕರೆದ ತಕ್ಷಣ ಬರಲು ನಟ ದರ್ಶನ್ ಕರು ಅಲ್ಲ, ಡಿಕೆ ಶಿವಕುಮಾರ್ ಹಸು ಅಲ್ಲ. ಇನ್ನೂ ಸಮಯ ಇದೆ. ತಾಕತ್ತಿದ್ದರೆ ಕರೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಸವಾಲು ಹಾಕಿದ್ದಾರೆ.
ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡಿದ್ದಾರೆ. ನಾನು ಕರೆದರೂ ದರ್ಶನ್ ಬರುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಕರೆದ ತಕ್ಷಣ ಬರೋದಕ್ಕೆ ದರ್ಶನ್ ಕರು ಅಲ್ಲ, ಡಿಕೆಶಿ ಹಸು ಅಲ್ಲ. ಸಂಜೆಯವರೆಗೆ ಇನ್ನೂ ಸಮಯ ಇದೆ. ನಾನೂ ಬಹಿರಂಗ ಪ್ರಚಾರ ಮುಗಿಯೋವರೆಗೂ ಕಾಯುತ್ತೇನೆ. ಸಂಜೆಯ ಒಳಗೆ ಡಿಕೆಶಿಗೆ ತಾಕತ್ ಇದ್ದರೆ ದರ್ಶನ್ ಅವರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ ಎಂದು ಅಶೋಕ್ ಹೇಳಿದ್ದಾರೆ.
ಆರ್ ಆರ್ ನಗರಕ್ಕೆ ಐದಾರು ಸಾವಿರ ಜನ ಹೊರಗಿಂದ ಬಂದಿದ್ದಾರೆ. ಕ್ಷೇತ್ರಕ್ಕೆ ಹೊರಗಿಂದ ಬಂದಿರೋರನ್ನೆಲ್ಲ ಹೊರಗೆ ಕಳಿಸಬೇಕು. ಕ್ಷೇತ್ರದಲ್ಲಿ ಅಡಗಿ ಕೂತಿರುವವರನ್ನೆಲ್ಲ ಚುನಾವಣಾ ಆಯೋಗ ಹೊರಗೆ ಕಳಿಸಬೇಕು. ಆರ್ ಆರ್ ನಗರದ ಪಕ್ಕದ ಕ್ಷೇತ್ರಗಳಲ್ಲೂ ಹೊರಗಿನವರು ಅಡಗಿದ್ದಾರೆ. ಅಲ್ಲೂ ಅವರನ್ನು ಹುಡುಕಿ ಹೊರಗೆ ಅಟ್ಟಲಿ ಎಂದು ಆರ್ ಅಶೋಕ್ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
Read Also: ಮುನಿರತ್ನ ಪರ ಪ್ರಚಾರಕ್ಕಿಳಿಯಲಿದ್ದಾರೆ ನಟ ದರ್ಶನ್
ದರ್ಶನ್ ನಮ್ಮ ಪರ ಪ್ರಚಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್ನವರು ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದಿವಾಳಿ ಆಗುತ್ತದೆ. ಎಲ್ಲ ಶಾಸಕರೂ ಕಾಂಗ್ರೆಸ್ ಬಿಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ದಿವಾಳಿ ಪಕ್ಷ ಆಗುತ್ತದೆ. ಈ ಬಗ್ಗೆ ಮೊದಲು ಕಾಂಗ್ರೆಸ್ನವರು ಎಚ್ಚರಿಕೆ ವಹಿಸಲಿ ಎಂದೂ ಅಶೋಕ್ ತಿಳಿಹೇಳಿದರು.
ಈಗ ಕಾಂಗ್ರೆಸ್ ಪಾಡೇ ನಾಯಿಪಾಡಾಗಿದೆ. ಕಾಂಗ್ರೆಸ್ನಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದಾರೆ. ಈ 15 ಜನರ ವಿಚಾರದಲ್ಲಿ ಕಾಂಗ್ರೆಸ್ನವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್ನಿಂದ ಬಿಜೆಪಿಗೆ ಬಂದರು. ಕಾಂಗ್ರೆಸ್ನಿಂದ ಇನ್ನೂ ಐವರು ಶಾಸಕರು ಆಚೆ ಬರುತ್ತಾರೆ. ಐವರು ಶಾಸಕರು ಕಾಂಗ್ರೆಸ್ ಬಿಡಲು ಸಿದ್ಧವಿದ್ದಾರೆ. ಅವರನ್ನು ಮೊದಲು ಕಾಂಗ್ರೆಸ್ ನಾಯಕರು ತಡೆದಿಟ್ಟುಕೊಳ್ಳಲಿ ಎಂದಿದ್ದಾರೆ.
ಇದನ್ನೂ ಓದಿ: ಕನ್ನಡ ಭಾಷಾ ಅಭಿವೃದ್ಧಿಗಾಗಿ ಕನ್ನಡ ಕಾಯಕ ವರ್ಷ ಆಚರಣೆ: ಸಿಎಂ ಯಡಿಯೂರಪ್ಪ