ಪ. ಬಂಗಾಳದಲ್ಲಿ ವೈರಿ ಯಾರು? BJPಯೋ-TMCಯೋ? ಗೊಂದಲದಲ್ಲಿ ಎಡರಂಗ!
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲು ಸಿದ್ದತೆ ನಡೆಸುತ್ತಿವೆ. ಮೈತ್ರಿಯಲ್ಲಿ ಈಗಾಗಲೇ ಸೀಟು ಹಂಚಿಕೆಯ ಚರ್ಚೆ ಆರಂಭವಾಗಿದೆ. ಆದರೆ, ಚುನಾವಣೆಯಲ್ಲಿ ತಮ್ಮ ಎದುರಾಳಿಗಳು ಯಾರಾಗಿರಲಿದ್ದಾರೆ ಎಂಬುದೇ ಮೈತ್ರಿ ಪಕ್ಷಗಳಿಗೆ ಕಗ್ಗಂಟಾಗಿದೆ.
ಕೋಮುವಾದ, ಪ್ರಜಾತಂತ್ರ ವಿರೋಧಿ ಫ್ಯಾಸಿಸ್ಟ್ ಧೋರಣೆಯನ್ನು ಹೊಂದಿರುವ ಬಿಜೆಪಿ ದೇಶಕ್ಕೆ ಹೆಚ್ಚು ಅಪಾಯಕಾರಿ ಎಂದು ದೇಶಾದ್ಯಂತ ಎನ್ಡಿಎಯಿಂದ ಹೊರಗಿರುವ ಎಲ್ಲಾ ಪಕ್ಷಗಳು ಹೇಳುತ್ತಿವೆ. ಹಾಗಾಗಿ ಪ. ಬಂಗಾಳ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಾಳಿಯಾಗಿ ಪರಿಗಣಿಸಬೇಕಾ ಅಥವಾ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಟಿಎಂಸಿಯನ್ನು ಎದುರಾಳಿಯಾಗಿ ನೋಡಬೇಕಾ ಎಂಬ ಗೊಂದಲು ಪ. ಬಂಗಾಳದಲ್ಲಿ ಇತರ ಪಕ್ಷಗಳಿಗೆ ಪ್ರಶ್ನೆಯಾಗಿದೆ.
ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿರುವ ಬಿಜೆಪಿಯೇ ನಮಗೆ ಎಂದಿಗೂ ಪ್ರತಿಸ್ಪರ್ಧಿ. ನಾವು ಬಿಜೆಪಿಯನ್ನೇ ಎದುರಾಳಿಯಾಗಿ ನೋಡಬೇಕು ಎಮದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳುತ್ತಾರೆ. ಆದರೆ, ಕೇವಲ ಬಿಜೆಪಿಯನ್ನು ಮಾತ್ರ ಗುರಿಯಾಗಿಸಿದರೆ, ಆಡಳಿತ (ಟಿಎಂಸಿ) ವಿರೋಧಿ ಅಲೆ ಇರುವ ಓಟುಗಳು ನಮ್ಮ ಕೈ ತಪ್ಪುತ್ತವೆ. ಈ ಓಟುಗಳು ಬಿಜೆಪಿಗೆ ದಕ್ಕುತ್ತವೆ. ಇದರ ಅನುಕೂಲ ಬಿಜೆಪಿಗೇ ಆಗುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ : ದುರ್ಗಾ ಪೂಜೆಯಲ್ಲಿ ನಮೋ ಭಾಗಿ!
‘ಟಿಎಂಸಿಯೂ ಸೇರಿದಂತೆ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬಿಜೆಪಿಯನ್ನು ಸೋಲಿಸಲು ಯತ್ನಿಸುವುದು ಆತ್ಮಹತ್ಯೆಗೆ ಸಮಾನ. ಎಲ್ಲರೂ ಬಿಜೆಪಿಯ ವಿರುದ್ಧ ಒಂದಾದರೆ ಆಡಳಿತ ವಿರೋಧಿ ಮತಗಳೆಲ್ಲವೂ ಬಿಜೆಪಿಗೆ ಸಿಗುತ್ತದೆ. ಏಕೆಂದರೆ, ಬಿಜೆಪಿ ಮಾತ್ರ ಆಗ ವಿರೋಧ ಪಕ್ಷದಂತೆ ಕಾಣಿಸುತ್ತದೆ. ಎಲ್ಲರೂ ಬಿಜೆಪಿಯನ್ನು ವಿರೋಧಿಸುವ ಕಾರ್ಯತಂತ್ರವು ಬಿಜೆಪಿಗೇ ಅನುಕೂಲಕರವಾಗಿ ಪರಿಣಮಿಸಬಹುದು’ ಎಂದು ಯೆಚೂರಿ ಹೇಳಿದ್ದಾರೆ.
ಆದರೆ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೀತ ಗೆಲುವು ಸಾಧಿಸಿರುವ ಸಿಪಿಐ(ಎಂಎಲ್), ಬಿಜೆಪಿಯೇ ನಮಗೆ ಪ್ರಧಾನ ಎದುರಾಳಿ. ತ್ರಿಪುರಾ, ಅಸ್ಸಾಂ ಮತ್ತು ಬಿಹಾರದಲ್ಲಿ ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿತು ಎಂಬುದನ್ನು ನಾವು ನೋಡಬೇಕು. ಹಾಗೆ ನೋಡಿದಾಗ ಮಾತ್ರ ಬಿಜೆಪಿಯೇ ನಮಗೆ ಎದುರಾಳಿ ಎಂದು ಗೊತ್ತಾಗುತ್ತದೆ. ಟಿಎಂಸಿ ಅಥವಾ ಇನ್ನಾವುದೇ ಪಕ್ಷವನ್ನು ಬಿಜೆಪಿಯೊಂದಿಗೆ ಸಮೀಕರಿಸಿ ನೋಡಲು ಸಾಧ್ಯವಿಲ್ಲ ಎಂದು ಸಿಪಿಐ(ಎಂಎಲ್) ಹೇಳುತ್ತಿದೆ.
ಸದ್ಯ, ಪಶ್ಷಿಮ ಬಂಗಾಳದ ಚುನಾವಣೆಯನ್ನು ಅಲ್ಲಿಯ ಪಕ್ಷಗಳು ಮೂರು ರಂಗಗಳಲ್ಲಿ ಎದುರಿಸಲಿವೆ. ಆಡಳಿತಾರೂಢ ಟಿಎಂಸಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಬಿಜೆಪಿ ಮತ್ತು ಗೂರ್ಖಾ ಜನ್ಮುಕ್ತಿ ಮೋರ್ಚಾಪಕ್ಷಗಳ ಎನ್ಡಿಎ ಮೈತ್ರಿ ಹಾಗೂ ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈಗ ಎಡರಂಗ ಮತ್ತು ಕಾಂಗ್ರೆಸ್ಗೆ ತಮ್ಮ ಎದುರಾಳಿ ಯಾರೆಂದು ಗುರುತಿಸಿಕೊಳ್ಳುವುದರಲ್ಲಿ ಗೊಂದಲ ಉಂಟಾಗಿದೆ.
ಇದನ್ನೂ ಓದಿ: ಬಂಗಾಳದಲ್ಲಿ ರಾಜಕೀಯ ಗಲಾಟೆ ಪುನರಾರಂಭ : ಮಮತಾ ಸರ್ಕಾರ ಗುರಿಯಾಗಿಸಿಕೊಂಡ ರಾಜ್ಯಪಾಲರು!