ಪ್ರತಿಭಟನೆಗೆ ಹೆದರಿದ ಮೋದಿ ಸರ್ಕಾರ; ಮುಷ್ಕರಕ್ಕೂ ಮುನ್ನವೇ ರೈತ ಮುಖಂಡರ ಬಂಧನ!
ಕೇಂದ್ರದ ಮೂರು ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನವೆಂಬರ್ 26-27 ರಂದು ದೆಹಲಿ ಚಲೋ ನಡೆಯುತ್ತಿದ್ದು, ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ವಿಫಲಗೊಳಿಸಲು ಹರಿಯಾಣದ ಡಜನ್ಗಟ್ಟಲೇ ರೈತ ಮುಂಡರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಯೋಗೇಂದ್ರ ಯಾದವ್ “ನವೆಂಬರ್ 26-27ರ ದೆಹಲಿ ಚಲೋಗೆ ದೇಶಾದ್ಯಂತ ಸಿದ್ಧತೆಗಳು ನಡೆದಿವೆ. ಆದರೆ ನಿನ್ನೆ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆ ನಡುವಿನ ಸಮಯದಲ್ಲಿ ಹರಿಯಾಣದಲ್ಲಿ ಡಜನ್ಗಟ್ಟಲೇ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ” ಎಂದಿದ್ದಾರೆ.
ರೈತ ಮುಖಂಡರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲದಿದ್ದರೂ ಬಂಧಿಸಲಾಗಿದೆ. ಸರ್ಕಾರ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿರೋಧವನ್ನು ತಡೆಗಟ್ಟಲು ಇಂತಹ ನೀಚಮಟ್ಟಕ್ಕೆ ಇಳಿದಿದೆ ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ, ಕೇಂದ್ರದ ಈ ಬೆದರಿಕೆಗೆ ನಾವು ಬಗ್ಗುವುದಿಲ್ಲ. ನವೆಂಬರ್ 26-27 ರಂದು ದೆಹಲಿ ಚಲೋ ಹೋರಾಟ ನಡೆದೆ ನಡೆಯುತ್ತದೆ. ಈ ಹೋರಾಟಕ್ಕೆ ದೇಶಾದ್ಯಂತದ ಪ್ರಜ್ಞಾವಂತರು, ಸಾಮಾನ್ಯ ಜನ ಬೆಂಬಲಿಸಬೇಕು ಎಂದು ಯಾದವ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್ ಹೊಸ ತಂತ್ರ; ಸಿದ್ದರಾಮಯ್ಯ ನೇತೃತ್ವದಲ್ಲಿ ಅಖಾಡಕ್ಕಿಳಿದ ಕಾಂಗ್ರೆಸ್!