ರೈತರನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದ ಹಳೆ ಕ್ಲಿಪ್ ಇತ್ತೀಚಿನ ವಿಡಿಯೋ ಎಂದು ಹಂಚಿಕೆ..!
ಹೊಸ ಕೃಷಿ ವಿರೋಧಿ ಕಾನೂನುಗಳನ್ನು ವಿರುದ್ಧ ರೈತರು ಇಂದು ಭಾರತ್ ಬಂದ್ ಗೆ ಕರೆ ಕೊಟ್ಟಿದ್ದಾರೆ. ಈ ಮಧ್ಯೆ ಕೆಲ ದಾರಿತಪ್ಪಿಸುವಂತಹ ನಕಲಿ ವಿಡಿಯೋಗಳು, ಫೋಟೋಗಳು ಹಾಗೂ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ರೈತರಿಗೆ ಬೆಂಬಲವಾಗಿ ಮಾತನಾಡುವ ರಾಜನಾಥ್ ಸಿಂಗ್ ಅವರ ಶಾರ್ಟ್ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಉದ್ದೇಶಿಸಿ ಮಾತನಾಡುತ್ತಿರುವ ರಕ್ಷಣಾ ಸಚಿವರ ಇತ್ತೀಚಿನ ವಿಡಿಯೋ ಆಗಿದೆ ಎಂದು ಹೇಳಲಾಗಿದೆ.
ಹೀಗೆ ವೈರಲ್ ಆದ ವೀಡಿಯೋವೊಂದರ ಶೀರ್ಷಿಕೆಯಲ್ಲಿ, ” ರಾಜನಾಥ್ ಸಿಂಗ್ ಅವರು ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಆಂದೋಲನ ನಡೆಸುವ ರೈತರೊಂದಿಗೆ ನಿಲ್ಲುತ್ತಾರೆ ಎಂದು ಹೇಳುತ್ತಿದ್ದಾರೆ ಮತ್ತು ರೈತರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಕಾರಣಕ್ಕಾಗಿ ಪ್ರಧಾನಿಯನ್ನು ಟೀಕಿಸುತ್ತಾರೆ” ಎಂದಿದೆ. (ಬಿಗ್ ಬ್ರೇಕಿಂಗ್: ರೈತರ ವಿಷಯದಲ್ಲಿ ಬಿಜೆಪಿಯಲ್ಲಿ ದೊಡ್ಡ ಒಡಕು! ರಾಜನಾಥ್ ಸಿಂಗ್ ರೈತರನ್ನು ಬೆಂಬಲಿಸುತ್ತಾರೆ.)
2013 ಯುಪಿಎ ಆಳ್ವಿಕೆ ಸಮಯದಲ್ಲಿ ದೆಹಲಿಯ ಜಂತರ್ ಮಂತರ್ ದಲ್ಲಿ ಧರಣಿ ನಡೆಸುತ್ತಿರುವ ರೈತರನ್ನು ರಾಜನಾಥ್ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಿತು.
ಮಾರ್ಚ್ 19, 2013 ರಂದು ದಿ ಹಿಂದೂ ಪ್ರಕಟಿಸಿದ ವರದಿಯ ಪ್ರಕಾರ, ಭಾರತದಾದ್ಯಂತದ ಸಾವಿರಾರು ರೈತರು ರೈತರಿಗೆ ಕನಿಷ್ಠ ಆದಾಯವನ್ನು ಖಾತರಿಪಡಿಸುವ ಆಯೋಗ ಸೇರಿದಂತೆ ಹಲವಾರು ಬೇಡಿಕೆಗಳೊಂದಿಗೆ ರಾಜಧಾನಿಯನ್ನು ತಲುಪಿ ಪ್ರತಿಭಟಿಸಿದರು.
ಮಾರ್ಚ್ 20, 2013 ರಂದು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಇದೇ ವೀಡಿಯೊ ನೋಡಬಹುದು. ಆ ವೀಡಿಯೊದ ಶೀರ್ಷಿಕೆ, “ಶ್ರೀ ರಾಜನಾಥ್ ಸಿಂಗ್ ನವದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ: 20.03.2013” ಎಂದಿದೆ. ಇದೇ ವೀಡಿಯೊ ರಾಜನಾಥ್ ಸಿಂಗ್ ಅವರ ಅಧಿಕೃತ ವೆಬ್ಸೈಟ್ನಲ್ಲಿ ಇದೇ ರೀತಿಯ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾಗಿದೆ.
ಆದ್ದರಿಂದ ರಾಜನಾಥ್ ರೈತರನ್ನು ಉದ್ದೇಶಿಸಿ ಮಾತನಾಡುವ ವೈರಲ್ ವಿಡಿಯೋ ಸುಮಾರು ಎಂಟು ವರ್ಷ ಹಳೆಯದಾಗಿದೆ. ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಇದು ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.