ರೈತ ಹೋರಾಟಕ್ಕೆ ಎಎಪಿ ಬೆಂಬಲ; ದೆಹಲಿ ಮುಖ್ಯಮಂತ್ರಿಯನ್ನೇ ಗೃಹಬಂಧನದಲ್ಲಿಟ್ಟ ಪೊಲೀಸರು!
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಆಮ್ ಆದ್ಮಿ ಪಕ್ಷ ನಿನ್ನೆ ಬೆಂಬಲ ವ್ಯಕ್ತಪಡಿಸಿತ್ತು. ನಿನ್ನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟನಿರತ ರೈತರ ಸ್ಥಿತಿಗತಿಗಳ ಬಗ್ಗೆ ವಿಚಾರಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ದೆಹಲಿ ಪೊಲೀಸರು ಇಂದು ಗೃಹ ಬಂಧನ ವಿಧಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಇಂದು ಬೆಳಿಗ್ಗೆ ಆಪ್ ಪಕ್ಷವು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು “ನಿನ್ನೆ ಸಿಂಘು ಗಡಿಯಲ್ಲಿ ಹೋರಾಟ ನಿರತ ರೈತರನ್ನು ಭೇಟಿ ಮಾಡಿದ ನಂತರ ಮಾನ್ಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರನ್ನು ದೆಹಲಿ ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ. ಯಾರೂ ಅವರ ಮನೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ” ಎಂದಿದೆ.
Important :
BJP's Delhi Police has put Hon'ble CM Shri @ArvindKejriwal under house arrest ever since he visited farmers at Singhu Border yesterday
No one has been permitted to leave or enter his residence#आज_भारत_बंद_है#BJPHouseArrestsKejriwal
— AAP (@AamAadmiParty) December 8, 2020
ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ದೆಹಲಿಯ ವಿವಿಧ ಪುರಸಭೆಗಳ ಮೂವರು ಮೇಯರ್ಗಳು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟಿಸಲು ಪೊಲೀಸರ ಪಡೆದಿದ್ದರು. ಇದನ್ನೆ ನೆಪವಾಗಿಟ್ಟುಕೊಂಡು ಪೊಲೀಸರು ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿಟ್ಟಿದ್ದಾರೆ. ಕೇಜ್ರಿವಾಲ್ ಅವರ ನಿವಾಸವವನ್ನು ಸಂಪೂರ್ಣವಾಗಿ ಬ್ಯಾರಿಕೇಡ್ ಗಳಿಂದ ಮುಚ್ಚಲಾಗಿದೆ, ಯಾರಿಗೂ ಆವರಣಕ್ಕೆ ಪ್ರವೇಶಿಸಲು ಅಥವಾ ಹೊರಬರಲು ಅವಕಾಶವಿಲ್ಲ ಎಂದು ಆಪ್ ಹೇಳಿದೆ. ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.
ನಿನ್ನೆ ರೈತರನ್ನು ಬೆಂಬಲಿಸಿ ಮಾತನಾಡಿದ್ದ ಕೇಜ್ರಿವಾಲ್ “ಎಎಪಿ ಡಿಸೆಂಬರ್ 8 ರಂದು ರೈತ ಸಂಘಟನೆಗಳು ನಡೆಸುತ್ತಿರುವ ಭಾರತ್ ಬಂದ್ ಅನ್ನು ಬೆಂಬಲಿಸುತ್ತದೆ. ಎಎಪಿ ಸ್ವಯಂಸೇವಕರು ಕೂಡ ಆ ದಿನ ದೇಶಾದ್ಯಂತ ನಡೆಯುವ ಶಾಂತಿಯುತ ಪ್ರತಿಭಟನೆಗಳಲ್ಲಿ ರೈತರೊಂದಿಗೆ ಕೈಜೋಡಿಸುತ್ತಾರೆ. ರೈತರನ್ನು ಬೆಂಬಲಿಸುವಂತೆ ಭಾರತದ ನಾಗರಿಕರಲ್ಲಿ ಮನವಿ ಮಾಡುತ್ತೇನೆ” ಎಂದಿದ್ದರು.
‘ರೈತರ ಎಲ್ಲ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ. ಅವರ ಸಮಸ್ಯೆ ಮತ್ತು ಬೇಡಿಕೆಗಳು ಮಾನ್ಯವಾಗಿವೆ. ನನ್ನ ಪಕ್ಷ ಮತ್ತು ನಾನು ಮೊದಲಿನಿಂದಲೂ ಅವರೊಂದಿಗೆ ಬೆಂಬಲಕ್ಕೆ ನಿಂತಿದ್ದೇವೆ. ರೈತರ ಪ್ರತಿಭಟನೆಯ ಆರಂಭದಲ್ಲಿ ದೆಹಲಿ ಪೊಲೀಸರು 9 ಕ್ರೀಡಾಂಗಣಗಳನ್ನು ಜೈಲುಗಳಾಗಿ ಪರಿವರ್ತಿಸಲು ಅನುಮತಿ ಕೋರಿದ್ದರು. ನನ್ನ ಮೇಲೆ ಒತ್ತಡ ಹೇರಿದ್ದರೂ ಅನುಮತಿ ನೀಡಲಿಲ್ಲ’ ಎಂದಿದ್ದರು.
ಇದನ್ನೂ ಓದಿ: ಭಾರತ್ ಬಂದ್: ರೈತರಿಗೆ ನಟಿ ಪ್ರಿಯಾಂಕ ಚೋಪ್ರಾ ಮತ್ತು ಸೋನಮ್ ಕಪೂರ್ ಸಾಥ್