ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯತೆ ತೊಲಗಲು ಭೂಮಿ ರಾಷ್ಟ್ರೀಕರಣವಾಗಬೇಕು: ಅಂಬೇಡ್ಕರ್

ಭಾರತದ ರೈತಾಪಿಯಲ್ಲಿ ಶೇ. 86ರಷ್ಟು ಸಣ್ಣ ರೈತಾಪಿಗಳು. 1991ರ ನಂತರ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಕೊಡುತ್ತಿದ್ದ ಎಲ್ಲಾ ಬೆಂಬಲಗಳನ್ನೂ ಒಂದೊಂದಾಗಿ ಹಿಂತೆಗೆದುಕೊಳ್ಳುತ್ತಿರುವುದರಿಂದ ಬಿಗಡಾಯಿಸುತ್ತಿರುವ ಕೃಷಿ ಬಿಕ್ಕಟ್ಟಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವವರು ಸಣ್ಣ ರೈತಾಪಿಯೇ.

ಆದರೆ ಸರ್ಕಾರ ಸಣ್ಣ ರೈತಾಪಿಯ ಬಿಕ್ಕಟ್ಟನ್ನೇ ನೆಪ ಮಾಡಿಕೊಂಡು APMC by pass ಕಾಯಿದೆ ಹಾಗು Contract Farming ಕಾಯಿದೆಗಳನ್ನು ಜಾರಿ ಮಾಡಿ ಕೃಷಿಯನ್ನು ಕಾರ್ಪೊರೇಟ್ ವಶಕ್ಕೆ ಒಪ್ಪಿಸುವ ಪ್ರಯತ್ನ ನಡೆಸುತ್ತಿದೆ.

ಭಾರತೀಯ ಸಮಾಜದ ಎಲ್ಲಾ ಕ್ಷೇತ್ರಗಳ ಸಮಸ್ಯೆಗಳನ್ನೂ ತ ಳಸಮುದಾಯದ ಹಾಗು ಪರ್ಯಾಯ ದೃಷ್ಟಿಕೋನದದಿಂದ ಗ್ರಹಿಸಿ ಪರಿಹಾರ ಸೂಚಿಸುತ್ತಿದ್ದ ಅಂಬೇಡ್ಕರ್ ಅವರು ಕೃಷಿ ಕ್ಷೇತ್ರದ ಬಗ್ಗೆ ಯಾವ ನಿಲುವನ್ನು ಹೊಂದಿದ್ದರು?

ಪ್ರಭುತ್ವಗಳು ಉಳುವವನಿಗೆ ಭೂಮಿ ಕೊಟ್ಟು ಕೈತೊಳೆದುಕೊಳ್ಳುವುದರಿಂದ ರೈತರ ಅಥವಾ ದೇಶದ ಸಮಸ್ಯೆಯು ಬಗೆಹರಿಯುವುದಿಲ್ಲ ಹಾಗು ಭೂ ಹೀನ ದಲಿತರಿಗೆ ಭೂಮಿಯು ದಕ್ಕುವುದಿಲ್ಲ ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಕೃಷಿ ಬಗ್ಗೆ ಅಂಬೇಡ್ಕರ್ ಹೇಳಿದ್ದು:

1) ಕೃಷಿ ಭೂಮಿಯ ಒಡೆತನವನ್ನು ಪ್ರಭುತ್ವವೇ ಉಳಿಸಿಕೊಳ್ಳಬೇಕು

2) ರೈತರಿಗೆ ಗೇಣಿಗೆ ಜಮೀನು ಕೊಟ್ಟು ಕಡ್ಡಾಯ ಸಾಮೂಹಿಕ ಕೃಷಿ ಯನ್ನು ಜಾರಿಗೊಳಿಸಬೇಕು

3) ಹಾಗು ಕೃಷಿಗೆ ಬೇಕಾದ ಇತರ ಸಲಕರಣೆಗಳನ್ನು ಸರ್ಕಾರವೇ ಒದಗಿಸಬೇಕು…ಎಂದು ಪ್ರತಿಪಾದಿಸಿದ್ದರು.

ಮೇಲ್ಜಾತಿ ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯಗಳೆರಡಕ್ಕೂ ಒಂದೇ ಮೂಲವಿದೆ. ಈ ದೇಶದ ವರ್ಗ ಹಾಗೂ ಜಾತಿಯ ಬೇರುಗಳು ಭೂ ಒಡೆತನದಲ್ಲಿದ್ದು, ಅದನ್ನು ಈ ಮೂಲಕ ಮಾತ್ರ ಮುರಿಯಬಹುದು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ಗ್ರಹಿಕೆಯಾಗಿತ್ತು.

ಅಷ್ಟು ಮಾತ್ರವಲ್ಲ.

ಅಸ್ಪೃಶ್ಯ ದಲಿತರಿಗೆ ಹಿಂದೂ ಸವರ್ಣಿಯ ಸಮಾಜ ಉಳುಮೆ ಮಾಡಲು ಅವಕಾಶವನ್ನೇ ಕೊಡದಿರುವುದರಿಂದ “ಉಳುವವನಿಗೆ ಭೂಮಿ” ನೀತಿಯಿಂದ ಈ ದೇಶದ ಕೊಟ್ಯಾಂತರ ಭೂ ಹೀನ ದಲಿತರಿಗೆ ಒಂದಿಂಚು ಭೂಮಿಯು ದಕ್ಕುವುದಿಲ್ಲ. ಹಾಗು ಎಲ್ಲಿಯತನಕ ದಲಿತರಿಗೆ ಭೂಮಿ ಸಿಕ್ಕುವುದಿಲ್ಲವೋ ಅಲ್ಲಿಯತನಕ ಹಿಂದೂ ಸಮಾಜದ ಮೇಲೆ ದಲಿತರ ಅವಲಂಬನೆಯು ತಪ್ಪುವುದಿಲ್ಲ. ಗುಲಾಮಗಿರಿಯು ತಪ್ಪುವುದಿಲ್ಲ ಆದ್ದರಿಂದ ಕನಿಷ್ಠ ಪಕ್ಷ ರಾಜ್ಯಗಳಲ್ಲಿರುವ ಸರ್ಕಾರಿ ಜಮೀನುಗಳ ನಿರ್ವಹಣೆ ಮತ್ತು ಒಡೆತನವನ್ನಾದರೂ ಕೇಂದ್ರದ ಪಟ್ಟಿಗೆ ಸೇರಿಸಿ ಅವನ್ನು ದಲಿತರಿಗೆ ಹಂಚಲೋಸುಗ ವಿಶೇಷ ಕಮಿಷನರ್ ಅನ್ನು ನೇಮಕಗೊಳಿಸಬೇಕು ಎಂದು ಕೂಡಾ ಅಂಬೇಡ್ಕರ್ ಆಗ್ರಹಿಸಿದ್ದರು

ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

ಸಾರಾಂಶದಲ್ಲಿ ಸರ್ಕಾರಿ ಬೆಂಬಲ, ಸಾಮೂಹಿಕ ಕೃಷಿ , ಭೂ ಹೀನ ದಲಿತರಿಗೆ ಭೂಮಿ ಇವುಗಳಿಂದ ಮಾತ್ರ ದಲಿತ ಭಾರತ ಹಾಗು ರೈತ ಭಾರತದ ವಿಮೋಚನೆ ಸಾಧ್ಯವಾಗುತ್ತದೆಯೇ ವಿನಾ ಸರ್ಕಾರ ಅನುಸರಿಸುತ್ತಿರುವ “ಉಳುವವನಿಗೆ ಭೂಮಿ” ಎಂಬ ಕಾರ್ಯಕ್ರಗಳಿಂದಲ್ಲ ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಈ ನಿಟ್ಟಿನಲ್ಲಿ ಭಾರತದ ಸಂಸತ್ತಿನಲ್ಲಿ ಸಂವಿಧಾನದ ನಾಲ್ಕನೇ ತಿದ್ದುಪಡಿ ಕಾಯಿದೆಯ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಾ ಅಂಬೇಡ್ಕರ್ ಅವರು ತಮ್ಮ ಅಭಿಪ್ರಾಯವನ್ನು ಸುದೀರ್ಘವಾಗಿ ಮಂಡಿಸುತ್ತಾರೆ. ಅದರ ಮುಖ್ಯಾಂಶವು ಸಾರಭೂತವಾಗಿ ಈ ಕೆಳಗಿನ ವಾಕ್ಯಗಳಲ್ಲಿ ಸಂಗ್ರಹವಾಗಿ ವ್ಯಕ್ತವಾಗಿದೆ ಎಂದು ನನಗನಿಸಿದೆ.

( ಇದು ಅಂಬೇಡ್ಕರ್ ಅವರ ಸಮಗ್ರ ಇಂಗ್ಲಿಷ್ ಬರಹ ಹಾಗು ಭಾಷಣಗಳ Volume 15 ರ ಪುಟ 960ರಲ್ಲಿದೆ:)

“… I am of opinion that peasant proprietorship in this country is going to bring about complete ruination of the country. What we want is—although I am not a Communist—the Russain system of collective farming. That is the only way by which we can solve our agricultural problem. To create peasant proprietorship and to hand overland to peasants who have not got means of production is in my judgement…… I am prepared to pick and choose from everyone, Socialist, Communist or other. I do not claim infallibility and as Buddha says there is nothing infallible; there is nothing final and everything is liable to examination.”
( (BAWS, Vol. 15, p. 960))

(… ನನ್ನ ಪ್ರಕಾರ ಈ ದೇಶದಲ್ಲಿ ಸಣ್ಣ ಹಿಡುವಳಿ ಒಡೆತನವು ಈ ದೇಶವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ನಾನು ಕಮ್ಯುನಿಸ್ಟ್ ಅಲ್ಲ. ಆದರೂ ಈ ದೇಶಕ್ಕೆ ರಷಿಯನ್ ಮಾದರಿ ಸಾಮೂಹಿಕ ಕೃಷಿ ವ್ಯವಸ್ಥೆಯ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆ. ಅದರಿಂದ ಮಾತ್ರವೇ ನಮ್ಮಕೃಷಿ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳಲು ಸಾಧ್ಯ .ಸಣ್ಣಸಣ್ಣ ಹಿಡುವಳಿತನವನ್ನು ಹುಟ್ಟುಹಾಕಿ, ಯಾವುದೇ ಬಗೆಯ ಉತ್ಪಾದನಾ ಸಾಧನಗಳ ಒಡೆತನವಿಲ್ಲದ ಆ ಸಣ್ಣ ಹಿಡುವಳಿದಾರರಿಗೆ ಭೂಮಿಯನ್ನು ವರ್ಗಾಯಿಸುವುದೆಂದರೆ ನನ್ನ ಪ್ರಕಾರ.. (ವಿನಾಶವೇ ).. ನಾನು ನನಗೆ ಅಗತ್ಯವೆನಿಸುವ ವಿಷಯವನ್ನು ಸಮಾಜವಾದಿಗಳಿಂದ, ಕಮ್ಯುನಿಸ್ಟರಿಂದ ಅಥವಾ ಇನ್ನಾರಿಂದ ಬೇಕಾದರೂ ಹೆಕ್ಕಿ ಪಡೆದುಕೊಳ್ಳುತ್ತೇನೆ. ನಾನೊಬ್ಬ ದೋಷರಹಿತ ಎಂದು ಯಾವತ್ತಿಗೂ ಪ್ರತಿಪಾದಿಸಿಲ್ಲ. ಬುದ್ಧ ಹೇಳುವಂತೆ ಯಾವುದು ದೋಷ ರಹಿತವಲ್ಲ. ಯಾವುದು ಅಂತಿಮವಲ್ಲ. ಎಲ್ಲವು ಪರೀಕ್ಷೆಗೆ ಒಳಪಡಬೇಕಾದದ್ದೇ ಆಗಿವೆ. )

– ಶಿವಸುಂದರ್


ಇದನ್ನೂ ಓದಿ: ರೈತ ವಿರೋಧಿ ಶಾಸನಗಳು: ಬಿಜೆಪಿಯ ಹತ್ತು ಸುಳ್ಳುಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights