ಟಿಎಂಸಿಗೆ ಸೇರಿಕೊಂಡ ಪತ್ನಿ ಸುಜಾತಾಗೆ ವಿಚ್ಚೇದನ ಕೊಟ್ಟ ಬಿಜೆಪಿ ಸಂಸದ ಸೌಮಿತ್ರಾ ಖಾನ್!
2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿ ಸುಜಾತಾ ಮೊಂಡಾಲ್ ಖಾನ್ ಅವರಿಗೆ ಭಾರತೀಯ ಜನತಾ ಪಕ್ಷದ ಸಂಸದ ಸೌಮಿತ್ರಾ ಖಾನ್ ತಮ್ಮ ವಿಚ್ಚೇದನ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಸೌಮಿತ್ರ ಖಾನ್ ಭಾರತೀಯ ಜನತ ಯುವ ಮೋರ್ಚಾದ ಅಧ್ಯಕ್ಷ ಮತ್ತು ಬಿಷ್ಣುಪುರದ ಸಂಸದರಾಗಿದ್ದಾರೆ.
ಸುಜಾತಾ ಮೊಂಡಾಲ್ ಖಾನ್ ಅವರು ಕೋಲ್ಕತ್ತಾದಲ್ಲಿ ಹಿಂದಿನ ದಿನ ಟಿಎಂಸಿಗೆ ಸೇರಿಕೊಂಡರು. ಹೀಗಾಗಿ ಈಗ ಬಿಷ್ಣುಪುರ ಸಂಸದ ಸೌಮಿತ್ರಾ ಖಾನ್ ಅವರು ಸುಜಾತಾ ಮೊಂಡಲ್ ಖಾನ್ ಅವರಿಗೆ ವಿಚ್ಚೇದನ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಜೊತೆಗೆ ಬಿಷ್ಣುಪುರದ ಬಾರ್ಜೋರಾದಲ್ಲಿ ಸುಜಾತಾ ಖಾನ್ ಅವರ ಕಾರು ಮತ್ತು ಮನೆಯ ಭದ್ರತೆಯನ್ನು ಹಿಂಪಡೆಯಲಾಗಿದೆ.
ಟಿಎಂಸಿಗೆ ಸೇರಿದ ನಂತರ ಸುಜಾತಾ ಮೊಂಡಾಲ್ ಖಾನ್, ‘ಬಿಜೆಪಿಗೆ ಸರಿಯಾದ ಗೌರವವನ್ನು ಕೊಡಲು ಬರುವುದಿಲ್ಲ. ನನಗೆ ಬಿಜೆಪಿಯಲ್ಲಿ ಯಾವುದೇ ಗೌರವ ಇರಲಿಲ್ಲ. ಕಳಂಕಿತ ನಾಯಕರನ್ನು ಶುದ್ಧೀಕರಿಸಲು ಯಾವ ರೀತಿಯ ಸಾಬೂನು ಬಳಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ಬಿಜೆಪಿ ಮತ್ತು ನನ್ನ ಪತಿ [ಸೌಮಿತ್ರ ಖಾನ್] ಗಾಗಿ ಹೋರಾಡಿದ್ದೆವು … ಲೋಕಸಭಾ ಚುನಾವಣೆಯಲ್ಲಿ ನಾವು ಅವರಿಗೆ [ಬಿಜೆಪಿ ಮತ್ತು ಸೌಮಿತ್ರಾ ಖಾನ್] ಗೆಲುವು ತಂದುಕೊಟ್ಟೆವು. ಅವರು ಕೇವಲ ಅವಕಾಶವಾದಿಗಳಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಸುಜಾತಾ ಮೊಂಡಾಲ್ ಖಾನ್ ಆರೋಪಿಸಿದ್ದಾರೆ.