ಮಹಾರಾಷ್ಟ್ರದಲ್ಲಿ BJPಗೇ ಆಪರೇಷನ್; ಎನ್ಸಿಪಿ ಸೇರಲಿದೆ ಬಿಜೆಪಿಗರ ದಂಡು: ಅಜಿತ್ ಪವಾರ್
ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದ ಹಲವು ನಾಯಕರು ಮೂರ್ನಾಲ್ಕು ತಿಂಗಳಲ್ಲಿ ಎನ್ಸಿಪಿಗೆ ಮರಳಿ ಬರಲಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
“ಈ ಮೊದಲು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಎನ್ಸಿಪಿ ಮತ್ತು ಕಾಂಗ್ರೆಸ್ನ ನಾಯಕರು ಮತ್ತು ಕಾರ್ಯಕರ್ತರನ್ನು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ತನ್ನತ್ತ ಸೆಳೆದುಕೊಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇದರಿಂದ ತಮ್ಮ ಪ್ರದೇಶದ ಅಭಿವೃದ್ದಿಯಾಗುತ್ತದೆ. ತಮಗೂ ಹಲವು ಸ್ಥಾನಗಳು ಸಿಗುತ್ತವೆ ಎಂದು ಅವರೆಲ್ಲರೂ ಬಿಜೆಪಿ ಸೇರಿದ್ದರು. ಆದರೆ, ಈಗ ಅವರೆಲ್ಲರೂ ನಿರಾಶೆಗೊಂಡಿದ್ದಾರೆ. ಆದ್ದರಿಂದ, ಅವರು ಈಗ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ” ಎಂದು ಪವಾರ್ ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾರು ಪಕ್ಷಕ್ಕೆ ಸೇರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಪವಾರ್ ಹೇಳಿದ್ದಾರೆ.
“ಈಗ ಕೆಲವು ನಾಯಕರು ನಮ್ಮ ಪಕ್ಷಕ್ಕೆ ಸೇರಲು ಬಯಸಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸುತ್ತೇವೆ. ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್ನ ಕೆಲವು ಪ್ರಮುಖ ನಾಯಕರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!